Wednesday, January 2, 2013

ಕಾಲವನ್ನು ತಡೆಯೋರು ಯಾರೂ ಇಲ್ಲ

ಎಲ್ಲರೂ ಶತಪಥ ತಿರುಗುತಿದ್ದರು..ಯಾರಿಗೂ ಏನು ಮಾಡಲು ತೋಚುತ್ತಿಲ್ಲ!

ಯಾರಾದರೂ ಸಮವಸ್ತ್ರ ತೊಟ್ಟವರು ಹೊರಗೆ ಬಂದರೆ...ಏನೋ ಹೇಳುತ್ತಾರೆ!..ಏನೋ ತರಲು ಹೇಳುತ್ತಾರೆ...! ಏನೋ ಸಂತಸದ ವಿಷಯ ಹೇಳುತ್ತಾರೆ...ಹೀಗೆ ಸಾಗುತಿತ್ತು..ಯೋಚನಾ ಲಹರಿ...

ಸಮಯದ ನಡಿಗೆ ಹೃದಯ ಬಡಿತಕ್ಕಿಂತ ನಿಧಾನವಾಗಿತ್ತು..ಘಳಿಗೆ ಘಳಿಗೆಗೂ ಗಡಿಯಾರ ನೋಡಿಕೊಳ್ಳೋದೇ ಕಾಯಕವಾಗಿತ್ತು ...ಈಗ ಬರ್ತಾರೆ ಆಗ ಬರ್ತಾರೆ ಎನ್ನುವ ನಿರೀಕ್ಷೆ ಮುಗಿಲು ಮುಟ್ಟುತಿತ್ತು....ಕಣ್ಣುಗಳು ದ್ವಾರದ ಕಡೆಗೆ ಒಮ್ಮೆ..ಮೆಟ್ಟಿಲುಗಳ ಕಡೆಗೆ ಒಮ್ಮೆ ಹರಿದಾಡುತಿತ್ತು...

ಎಂಟಾಯಿತು, ಒಂಭತ್ತು ಆಯಿತು...ಕೊಳವೆ ಧರಿಸಿದ ಪುಣ್ಯಾತ್ಮರ ದರ್ಶನವಾಗಲಿಲ್ಲ..ಮತ್ತೆ ಬಾಗಿಲ ಕಡೆ, ಮೆಟ್ಟಿಲ ಕಡೆ ನೇಗಿಲಿನಂತೆ ಉಳಲು ಶುರು ಮಾಡಿದ  ಕಣ್ಣಾವೆಗಳು..!

ಮೊಬೈಲಿನಲ್ಲಿ ಯಾರಾದರೂ ಕರೆಮಾಡಬಹುದೇ ಎಂದು ನೋಡಿದರೆ ಅದು ನಿಸ್ತೇಜವಾಗಿ ಹಲ್ಲುಕಿರಿಯುತಿತ್ತು...ಮತ್ತೆ ಅದು ಅಣಕಿಸಿದಂತೆ ಭಾಸವಾಗುತಿತ್ತು...ಕರೆ ಬಂದಾಗ ಕಟ್ ಮಾಡಿ ಬಯ್ದುಕೊಳ್ಳುವೆ..ಈಗ ಮಾತ್ರ ನಾನು ಬೇಕೇ ಎಂಬ ಕುಹಕ ನೋಟ..

ಅಚಾನಕ್ಕಾಗಿ ನೀಲಿಯಾಕಾಶದ ಧಿರಿಸಿನಲ್ಲಿ ಒಂದು ಧ್ವನಿ ತೇಲಿ ಬಂತು..."ಕೆಳಗೆ ಕೂತಿರಿ...ಏನಾದರು ವಿಷಯ ಇದ್ದಾರೆ ಕರೆಯುತ್ತೇವೆ..ನಿಮ್ಮ ನಂಬರ್ ನಮ್ಮ ಹತ್ತಿರ ಇದೆ..."

"ಅಲ್ಲಾ..............ಇಲ್ಲಿ................ಹೆಂಗೆ..............ಏನೂ..................ಮತ್ತೆ....ಪರವಾಗಿಲ್ಲ..ಇಲ್ಲೇ..."

"ಬೇಡ..ಕೆಳಗೆ ಕೂತಿರಿ...ಏನೇ ಇದ್ದರೂ ವಿಷಯ ತಿಳಿಸುತ್ತೇವೆ..." ಬೆಕ್ಕಿನ ನಡಿಗೆ ನಡೆದುಕೊಂಡು ಆ ನೀಲಿ ವಸ್ತ್ರದ ಧ್ವನಿ ಮರೆಯಾಯಿತು...

ಬೇರೆ ದಾರಿ ಇರಲಿಲ್ಲ..ಶಕ್ತಿಗಳು ನಿಧಾನವಾಗಿ ಭಾರವಾದ ಹೃದಯ ಹೊತ್ತು ಮೆಟ್ಟಿಲನ್ನು ಇಳಿದು ಕೆಳಗೆ ಬಂದವು...
ಮತ್ತೆ ಒಂದು ಗುಟುಕು ಕಾಫಿ ಕುಡಿದು..ಒಮ್ಮೆ ಇದುವರೆಗೂ ನಡೆದ ಘಟನೆಗಳನ್ನು ಮೆಲುಕು ಹಾಕುತ್ತ....ಕಾಲದ ಭಾರವಾದ ಬಂಡಿಯನ್ನು ನೂಕಲು ಯತ್ನಿಸುತ್ತಿದ್ದವು!

ಅಲ್ಲಿನ ಫೋನ್ ಒಮ್ಮೆ ಕುಯ್ ಎಂದರೆ ಅದರತ್ತಲೇ ನೋಟ....ಮೊಬೈಲ್ ಸ್ವಲ್ಪ ಅಲುಗಾಡಿದರೂ ಏನೋ ಒಂದು ತವಕ...ಆತಂಕ...

ಹದಿನೈದು ದಿನಗಳಿಂದ ದಣಿದಿದ್ದ ಮೂರು ಶಕ್ತಿಗಳು ಹಾಗೆ ಕೆಲಕ್ಷಣ ಕುರ್ಚಿಗೆ ವರಗಿ ನಿದ್ದೇ ಮಾಡುವ ಆಗದ ಕೆಲಸಕ್ಕೆ ಕೈ ಹಾಕಲು ಪ್ರಯತ್ನಿಸಿದವು....

"ಹ್ಯಾಪಿ ನ್ಯೂ ಇಯರ್...ಹೊಸ ವರ್ಷದ ಶುಭಾಶಯಗಳು...ವಿಶ್ ಯು ಹ್ಯಾಪಿ ನ್ಯೂ ಇಯರ್...ಪೀ....ಹುರ್ರಾ......ಥ್ಯಾಂಕ್ ಯು...ವಿಶ್ ಯು ದಿ ಸೇಮ್....ಧನ್ಯವಾದಗಳು..ನಿಮಗೂ ಸಹ...."

ಆ ಚೀರಾಟ, ಕೇಕೆ, ಕಿರುಚು ಧ್ವನಿಗಳಿಗೆ ಎಚ್ಚರವಾಗಿ...ಅರೆ ಅರೆ ಏನು ಇಷ್ಟೊಂದು ಹೊತ್ತು ನಿದ್ದೆ ಮಾಡಿದ್ದೇವೆ ಛೆ ಛೆ...ಎಂದು ಮತ್ತೆ ಮೆಟ್ಟಿಲು ಹತ್ತಿದವು...ಏನೂ ಬದಲಾವಣೆಯಿಲ್ಲ..ಮೇಲೆ ನೇತು ಹಾಕಿದ ಟಿವಿಯಲ್ಲಿ ಲಕ್ಷದ ಒಂದು ಬಾರಿ ಪ್ರಸಾರವಾದ ಅದೇ ಜಾಹಿರಾತುಗಳು...!

ಹ್ಯಾಪಿ ನ್ಯೂ ಇಯರ್ ಸದ್ದು ಮೆಲ್ಲನೆ ತಣ್ಣಗಾಯಿತು..ಬೆಳಗಿನ ಚಳಿಗೆ ಮೈ..ಮನಸು ಮುದುಡಲು ಶುರುವಾಯಿತು...ಅಲ್ಲೇ ಇದ್ದ ರೊಟ್ಟಿನ ಬಾಕ್ಸ್ ಹರಡಿಕೊಂಡು ತಂದಿದ್ದ ಚಿಕ್ಕ ಚಿಕ್ಕ ಶಾಲುಗಳನ್ನು ಹೊದ್ದು...ಅಲ್ಲೇ ಮಲಗಲು ಪ್ರಯತ್ನ ಪಟ್ಟವು...

"ಹೇ ಎಳ್ರೋ ..ಕಾಫಿ..ತಗೋಳಿ...ಕಾಫಿ..." ಎನ್ನುತ್ತಾ ಆ ಶಕ್ತಿಗಳ ಹಿರಿಯ ಶಕ್ತಿ ಬಂದು ಎಚ್ಚರಿಸಿದಾಗಲೇ ಭುವಿಗಿಳಿದ ಅನುಭವ....

ಕಾಫೀ ಕುಡಿದು ಮತ್ತೆ ಮೆಟ್ಟಿಲು ಹತ್ತಿ ಬಂದರೆ  ಅದೇ ಜಾಹಿರಾತುಗಳು ಪರದೆಯ ಮೇಲೆ .....!

ಮತ್ತೆ ಅದೇ ನಿಧಾನಗತಿಯ ಗಡಿಯಾರ...... ಹೇಗೋ ಮತ್ತೆ ೨೪ ಘಂಟೆಗಳು ಕಳೆದವು...

ಒಂದು ಸಂದೇಶ ಕುಯ್ ಗುಟ್ಟುತ್ತ ಮೊಬೈಲ್ನಲ್ಲಿ ಸದ್ದು ಮಾಡಿತು...."ಸುಂದರವಾಗಿ ಅರಳಿದ ಮಲ್ಲಿಗೆ ಹೂವು ಬಾಡಿಗೆ ಅಲಂಕಾರದಲ್ಲಿ ಇದೆ..."

ಸಂಜೆ ಸುಮಾರು ಐದು ಮೂವತ್ತು ಸಮಯದಲ್ಲಿ ಸಮವಸ್ತ್ರದ ಹುಡುಗಿ ಕಣ್ಣಲ್ಲೇ ನೀರು ತುಂಬಿಕೊಂಡು ಸೌಮ್ಯವಾಗಿ ತಲೆ ಅಲ್ಲಾಡಿಸಿತು...


ದೂರದಲ್ಲೆಲ್ಲೋ "ನಾನೇ ಎಂಬ ಭಾವ ನಾಶವಾಯಿತು...ನೀನೆ ಎಂಬ ನೀತಿ ನಿಜವಾಯಿತು" ಉಲಿಯುತ್ತಿತ್ತು...ಆತ್ಮ ಮಿಥ್ಯ ಪರಮಾತ್ಮ ಸತ್ಯ ಎನ್ನುವ ಮಾತು ಸತ್ಯವೇ ಆದರೂ ಅದರ ಮೋಹ ಬಿಡಲು ಪಡುವ ಪಾಡು...ಹೇಳರಾರದು...


ಆ ಶಕ್ತಿಗಳು ಗೋಡೆಯ ಕಡೆ ತಿರುಗಿಕೊಂಡು ಚಾವಣಿಯನ್ನು ದಿಟ್ಟಿಸುತ್ತಾ ಕುಳಿತು ಬಿಟ್ಟವು..

ರೇಡಿಯೋದಲ್ಲಿ "ನಗಲಾರದೆ ಅಳಲಾರದೇ ತೊಳಲಾಡಿದೆ ಜೀವಾ..." ಹಾಡು ಎಲ್ಲ ಘಟನೆಗಳಿಗೆ ಮೂಕ ಸಾಕ್ಷಿಯಂತೆ
ತೇಲಿ ಬರುತಿತ್ತು!!!

(ಇಂದಿಗೆ ನನ್ನ ಅಪ್ಪ ಭೌತಿಕವಾಗಿ ಇಹಲೋಕ ತ್ಯಜಿಸಿ ಒಂದು ವರ್ಷ...ಆ ಕಡೆ ಕ್ಷಣಗಳನ್ನು ನೆನಪಿಸಿಕೊಂಡು...ನಮ್ಮೊಳಗೇ ಇರುವ ಆ ಮಹಾಚೇತನಕ್ಕೆ ನಮನ ಸಲ್ಲಿಸುವ ಒಂದು ಪುಟ್ಟ ಪ್ರಯತ್ನ ಈ ಲೇಖನ)