Monday, April 22, 2013

ನಾ ನಿನ್ನ ಮರೆಯಲಾರೆ!!!


"ಗುರು ಇವತ್ತು ಒಂದು ಸಿನಿಮಾಕ್ಕೆ ಹೋಗೋಣ?"

"ಯಾವ ಸಿನಿಮಾ?"..

"ಕತ್ರಿಗುಪ್ಪೆಯ ಕಾಮಾಕ್ಯ  ಚಿತ್ರಮಂದಿರದಲ್ಲಿ "ಈವಿಲ್ ಡೆಡ್ ಭಾಗ ಮೂರು" ಇದೆ

"ಸರಿ ಹಂಗಾದ್ರೆ ಒಂದು ಆಲೋಚನೆ..ಈಗ ಸಮಯ ಸಂಜೆ ಆರುವರೆ.. ಎರಡನೇ ಆಟಕ್ಕೆ (ಸೆಕೆಂಡ್ ಶೋ) ಹೋಗಿ ಸಿನೆಮಾ ಮುಗಿದ ಮೇಲೆ ಯಾವುದಾದರೂ ದಾಬಕ್ಕೆ ಹೋಗಿ ಊಟ ಮಾಡಿ ನಂತರ ಮನೆಗೆ ಹೋಗುವ ಏನಂತೀರ"

"ಸೂಪರ್ ಐಡಿಯಾ ಗುರು!.. ಇರು ನಮ್ಮ ಹುಡುಗರಿಗೆ ಫೋನ್ ಮಾಡ್ತೀನಿ ಎಲ್ಲರೂ ಹೋಗುವ!

ಇದು ೧೯೯೯ ಏಪ್ರಿಲ್ ತಿಂಗಳಲ್ಲಿ ನಾನು ಕೆಲಸ ಮಾಡುತ್ತಿದ್ದ ಪೀಣ್ಯ ಬಳಿಯ ಒಂದು ಆಫೀಸ್ ನಲ್ಲಿ ನಡೆದ ಒಂದು ಸಂಭಾಷಣೆ!

ಎಲ್ಲರ ಹತ್ತಿರ ಗಾಡಿ ಇತ್ತು ನಾನು, ಸತೀಶ, ಶ್ರೀಕಂಠ ಮೂರ್ತಿ, ಆಡಿಟರ್ ಮೂರ್ತಿ, ಚಂದ್ರು .. ಸುಮಾರು ಏಳು ಘಂಟೆಗೆ ಅಲ್ಲಿಂದ ಹೊರಟೆವು

ಆಗ ವಾಹನ ದಟ್ಟನೆ ಇಷ್ಟೊಂದು ಇರಲಿಲ್ಲಾವಾದ್ದರಿಂದ ಸುಲಭವಾಗಿ ಸುಮಾರು ಏಳು ಮುಕ್ಕಾಲು ಅಷ್ಟರ ಹೊತ್ತಿಗೆ ಕಾಮಾಕ್ಯ ಮುಂದೆ ತಲುಪಿದೆವು. ಶೋ ರಾತ್ರಿ ೯.೧೫ಗೆ ಇತ್ತು. ಸರಿ ಅಲ್ಲೇ ಕುಳಿತು ಪಾನಿ ಪುರಿ ಮಸಾಲೆ ಪುರಿ ಅಂತ ತಿಂದು ಸಮಯ
ಕಳೆದೆವು.
ಚಿತ್ರಕೃಪೆ - ಅಂತರ್ಜಾಲ 
ಈವಿಲ್ ಡೆಡ್ ಎಂಭತ್ತರ ದಶಕದಲ್ಲಿ ದೆವ್ವ ಭೂತಗಳ ಒಂದು ಭಯಾನಕ ಚಿತ್ರ ಎಂದು ಹೆಸರಾಗಿತ್ತು. ಆಗ ನಾನು ಸುಮಾರು ಹತ್ತು ಹನ್ನೆರಡು ವರ್ಷದವನು. ಅದನ್ನು ಸಿಂಫೊನಿ ಚಿತ್ರಮಂದಿರದಲ್ಲಿ ಸೆಕೆಂಡ್ ಶೋನ ಒಬ್ಬರೇ ನೋಡಿಕೊಂಡು ಕಬ್ಬನ್ ಪಾರ್ಕ್ ಮೂಲಕ ತ್ಯಾಗರಾಜ ನಗರ ತಲುಪಬೇಕು ಎನ್ನುವುದು ಗಾಂಧಿ ಬಜಾರ್, ತ್ಯಾಗರಾಜನಗರದ ಸುತ್ತ ಮುತ್ತಲಿನ ಕೆಲ ಎದೆಗಾರಿಕೆ ಹೊಂದಿದ ಪಡ್ಡೆಗಳ ಸವಾಲಾಗಿತ್ತು.

ಚಿತ್ರಕೃಪೆ - ಅಂತರ್ಜಾಲ
ಆಗಲೋ ಈಗಲೂ ಅನ್ನುವಂತೆ ಕೆಲವು ತುಣುಕುಗಳನ್ನು ನೋಡಿದ್ದೇ ಮತ್ತು ಹೆದರಿದ್ದೆ ಕೂಡ. ಈವಿಲ್ ಡೆಡ್ ಭಾಗ ಒಂದು.. ಭಯದ ಹುತ್ತವನ್ನೇ ಸೃಷ್ಠಿಸುತ್ತಿತ್ತು.

ಈಗ ಬೆಳೆದು ದೊಡ್ದವರಾಗಿದ್ದೆವು ಭಾಗ ಒಂದು -ಎರಡು ಎರಡನ್ನು ನೋಡಿರದ ನಾನು.. ಸ್ವಲ್ಪ ಧೈರ್ಯ ಪ್ರದರ್ಶನ ಮಾಡುವ ಎಂದು ಮೂರನೇ ಭಾಗ ಸೆಕೆಂಡ್ ಶೋ ನೋಡಿಯೇ ಬಿಡೋಣ ಎಂದು ನಿರ್ಧರಿಸಿ ಗೆಳೆಯರನ್ನೆಲ್ಲ ಕೂಡಿಕೊಂಡು ಕಾಮಾಕ್ಯ ಚಿತ್ರಮಂದಿರದಲ್ಲಿ ಉಸಿರು ಬಿಗಿ ಹಿಡಿದು ಕೂತಿದ್ದೆವು. ತೊಂಭತ್ತರ ದಶಕದಲ್ಲಿ ಕಾಮಾಕ್ಯ ಚಿತ್ರಮಂದಿರ ಅಮೋಘ ಸೌಂಡ್ ಸಿಸ್ಟಮ್ ನಿಂದ ಹೆಸರು ಮಾಡಿದ್ದ ಚಿತ್ರಮಂದಿರ.

ಇಂಗ್ಲಿಷ್ ಸಿನಿಮಾಗಳ ಅವಧಿ ಒಂದು ಘಂಟೆ ಆಸು ಪಾಸಿನಲ್ಲೇ ಮುಗಿಯುವ ಚಿತ್ರಗಳಾದ್ದರಿಂದ ನಮ್ಮ ದಾಬ ಕಾರ್ಯಕ್ರಮಕ್ಕೆ ಏನು ಅಡಚಣೆ ಇರಲಿಲ್ಲ.

ಸಿನೆಮಾ ಶುರುವಾಯಿತು. ಭಯಾನಕ ದೃಶ್ಯಗಳು , ಎದೆ ಜಿಲ್ ಎನಿಸುವ ಸೌಂಡ್, ಕ್ಯಾಮೆರ ಕೆಲಸ ಎಲ್ಲವು ಎದೆ ನಡುಕವನ್ನು ಹೆಚ್ಚಿಸಿದ್ದವು. ಒಂದು ಕ್ಷಣಕ್ಕೆ ಮಾಡಿದ ನಿರ್ಧಾರ ತಪ್ಪು ಎನ್ನಿಸಿದ್ದರೂ ಆ ಹರಯದ ಮರ್ಕಟ ಮನಸ್ಸು ತಕ್ಷಣಕ್ಕೆ ಸೋಲನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಿರಲಿಲ್ಲ. ಸರಿ ನೋಡಿಯೇ ಬಿಡೋಣ ಅಂತ ಪೂರ ಚಿತ್ರ ನೋಡಿ ಹೊರಬಂದೆವು. ಎಲ್ಲರ ಮುಖವೂ ಕರೆಂಟ್ ಹೊಡಿಸಿಕೊಂಡ ಕಾಗೆಯ ಹಾಗೆ ಆಗಿತ್ತು. (ಕೆಲವರ್ಷಗಳ ನಂತರ ಈವಿಲ್ ಡೆಡ್ ಭಾಗ ಒಂದು ಮತ್ತು ಎರಡು ನೋಡಿದ ಮೇಲೆ ಮೂರನೇ ಭಾಗ ಒಂದು ತಮಾಷೆ ಚಿತ್ರದಂತೆ ಕಂಡಿತ್ತು)

ಚಿತ್ರಕೃಪೆ - ಅಂತರ್ಜಾಲ
ಯಾರಲ್ಲೂ ದಾಬಕ್ಕೆ ಹೋಗುವ ಧೈರ್ಯ ಇರಲಿಲ್ಲ. ಆದರೆ ಮೊದಲು ಯಾರು ನಿರಾಕರಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಕಾರಣ ಮೊದಲಿಗೆ ಯಾರೂ ಬೇಡ ಎನ್ನುತ್ತಾರೆ ಅವರ ಕಾಲು ಎಳೆಯಲು ಮಿಕ್ಕೆಲ್ಲ "ಪುಕ್ಕಲು" ಹೃದಯದ ಗೆಳೆಯರು ಕಾಯುತ್ತಿದ್ದರು.

ಕಡೆಗೆ ಒಕ್ಕುರುಲಿನಿಂದ ನೆಡೆಯಿರೋ ದಾಬಕ್ಕೆ ಹೋಗೋಣ.. ಹೊಟ್ಟೆ ಹಸಿತ ಇದೆ ಅಂತ ನಿರ್ಧಾರ ಮಾಡಿ.. ಧೈರ್ಯದ ಮುಖವಾಡ ಹೊತ್ತು  ಬನ್ನೇರುಘಟ್ಟದ ರಸ್ತೆಯಲ್ಲಿದ್ದ ದಾಬ ಕಡೆ ಹೊರಟೆವು.

ಸುಮ್ಮನೆ ಮೇಲುನೋಟಕ್ಕೆ ತಮಾಷೆ ಮಾತಾಡುತ್ತಿದ್ದರೂ ಎಲ್ಲರಿಗೂ ಹೇಗಪ್ಪ ಮನೆ ಸೇರುವುದು ಎನ್ನುವ ಭಯ ಕಾಡುತ್ತಲೇ ಇತ್ತು. ದೆವ್ವದ ಸಿನಿಮಾ ನೋಡಿ, ಮಧ್ಯ ರಾತ್ರಿಯಲ್ಲಿ ಹೇಗೆ ಹೋಗುವುದು, ದಾರಿಯಲ್ಲಿ ಏನೂ ಸಿಗುತ್ತೋ ಏನೋ ಎನ್ನುವ ಭೀತಿ ಕಾಡುತ್ತಲೇ ಇತ್ತು.

ಹೊಟ್ಟೆಬಾಕರಾದ ನಾವೆಲ್ಲಾ ಏನೂ ಜಾಸ್ತಿ ತಿನ್ನದೇ ಆದಷ್ಟು ಬೇಗ ಮನೆಗೆ ಹೋಗಿ ಬಿದ್ದರೆ ಸಾಕು ಎನ್ನುವ ಹಾಗೆ ಇತ್ತು.  ಆದ್ರೆ ಸೋಗಿನ ಮುಖವಾದ ಧರಿಸಿದ್ದ ಕಾರಣ ಹಾಗೆ ಮಾಡುವಂತಿರಲಿಲ್ಲ :-)

ಆಡಿಟರ್ ಮೂರ್ತಿ ಮನೆ ಬನ್ನೇರುಘಟ್ಟದ ರಸ್ತೆಯಲ್ಲಿ ಇತ್ತು ಅವನನ್ನು ಮನೆ ಹತ್ತಿರ ಬಿಟ್ಟು ಮಿಕ್ಕವರು ಹೊರಟೆವು.

ನಾನು ಸತೀಶನಿಗೆ ಹೇಳಿದೆ "ಗುರು ಇವತ್ತು ನೀನು ನಮ್ಮ ಮನೆಗೆ (ವಿಜಯನಗರ) ಬಂದು ಬಿಡು.. ಬೆಳಿಗ್ಗೆ ಹೋಗುವಂತೆ" (ಯಾಕೆ ಹೀಗೆ ಹೇಳಿದೆ.... ಅದಕ್ಕೆ ಕಾರಣ ಬೇಕಿಲ್ಲ ಅಲ್ಲವೇ ಹ ಹ ಹ!)

ಸತೀಶ್ "ಲೋ ಕಾಂತ...  ಏನು ಯೋಚನೆ ಬೇಡ ನಿನ್ನ ಮನೆಯ ತನಕ ಬಂದು ನಾನು ನಮ್ಮ ಮನೆಗೆ ಹೋಗುತ್ತೇನೆ" ಎಂದ (ಅವನ ಮನೆ ಮಾಗಡಿ ರಸ್ತೆಯ ತಾವರೆಕೆರೆ). ನನಗೆ ತುಸು ಧೈರ್ಯ ಬಂತು ಕಾರಣ ಅವನ ಮನೆಗೆ ಹೋಗಬೇಕಾದರೆ ನಮ್ಮ ಮನೆಯ ರಸ್ತೆಯಲ್ಲೇ ಹೋಗಬೇಕಿತ್ತು.

ಶ್ರೀಕಂಠ ಮೂರ್ತಿ ಮನೆ ಶ್ರೀನಿವಾಸನಗರದಲ್ಲಿತ್ತು. ಅವನನ್ನು ಬೀಳ್ಕೊಟ್ಟು ನಾನು,  ಚಂದ್ರ, ಸತೀಶ ಹೊರಟೆವು. ಪುಕ್ಕಲ ಚಂದ್ರ.. ಗುರು ನಾನು ಇವತ್ತು ಶ್ರೀಕಂಠ ಮೂರ್ತಿ ಮನೆಯಲ್ಲಿ ಇರುತ್ತೇನೆ ನೀವು ಹೋಗಿ ಅಂತ ಹೇಳಿ ನಾವು ಮಾತಾಡುವ ಮುಂಚೆನೇ ಗಾಡಿ ತಿರುಗಿಸಿಕೊಂಡು ಹೊರಟು ಬಿಟ್ಟ.

ನಾನು ಸತೀಶ ಇಬ್ಬರೂ ಅವನನ್ನು ಮನಸಾರೆ "ಕಳ್ಳ.. ಪುಕ್ಕಲ, ಹೇಡಿ" ಅಂತೆಲ್ಲ ಬಯ್ದುಕೊಂಡು ಹೊರಟೆವು.   ನನಗೆ ಭಯದ ಹೊಗೆ ಕಾಡುತ್ತಿತ್ತು.   ಈ ಸತೀಶ ಕೈ ಕೊಟ್ಟರೆ ಏನು ಮಾಡೋದು ಅಂತ.

ಸತೀಶ "ಕಾಂತ ಏನೂ ಯೋಚನೆ ಮಾಡಬೇಡ.. ನಾನು ಬರ್ತೇನೆ ನಿನ್ನ ಜೊತೆ" ಅಂತ ಹೇಳಿದ.
ಸರಿ ಶ್ರೀನಿವಾಸ ನಗರದಿಂದ ವಿಜಯನಗರಕ್ಕೆ ಹನುಮಂತನಗರದ ಐವತ್ತು ಅಡಿರಸ್ತೆಯಲ್ಲಿ ಹೋಗುತ್ತಿದ್ದೆವು.

"ಕಾಂತ.. ಯಾಕೋ ನಮ್ಮ ಹುಡುಗರು ನೆನಪಾಗುತ್ತಿದ್ದಾರೆ. ನಿರ್ಮಲ ಸ್ಟೋರ್ಸ್ ಹತ್ತಿರ ಇರುವ ಕಗ್ಗಿಸ್ ಬೇಕರಿಯ ಹತ್ತಿರ ರೂಂನಲ್ಲಿ ಇದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ. ನೀನು ಇಲ್ಲೇ ಇದ್ದು ಬಿಡು ಬೆಳಿಗ್ಗೆ ಹೋಗುವಂತೆ" ಅಂತ ಸತೀಶ ಅಂದ.

ನನಗೆ ನಡುರಾತ್ರಿ ಕೋಪ ಬಂದರೂ ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ "ಲೋ....  ಹೋಗೋ ನೀನಿಲ್ಲದೆ ಹೋದರೆ....  ನಾನು ಮನೆಗೆ ಹೋಗೋಕೆ ಆಗೋಲ್ವಾ. ಒಬ್ಬನೇ ಹೋಗುತ್ತೇನೆ ಬಿಡು.. ಅಂತ ಗಾಡಿ ಸ್ಟಾರ್ಟ್ ಮಾಡಿದೆ. (ಗಾಡಿ ಗಡ ಗಡ ಎನುತ್ತಿತ್ತು.. ನನ್ನ ಬಾಡಿ ಕೂಡ ಮುಂದಿನ ಸೀನ್ ಬಗ್ಗೆ ನೆನೆದು ನಡುಗುತ್ತಿತ್ತು)

ಸಮಯ ನಡುರಾತ್ರಿ ಸುಮಾರು ಒಂದೂವರೆ ಘಂಟೆಯಾಗಿತ್ತು. ಗೆಳೆಯರೆಲ್ಲರೂ ನಾನಾ ಕಾರಣಗಳಿಂದ ಅವರವರ ಸುರಕ್ಷಿತ ಜಾಗಗಳನ್ನು ಸೇರಿಯಾಗಿತ್ತು (ಮಾರನೆ ದಿನ ಅವರನ್ನೆಲ್ಲಾ ಸರಿಯಾಗಿ ವಿಚಾರಿಸಿಕೊಂಡೆ ಅದು ಬೇರೆ ಕಥೆ).

ನಾನೊಬ್ಬನೇ ನಡುರಾತ್ರಿಯಲ್ಲಿ!

ನಿರ್ಮಲ ಸ್ಟೋರ್ಸ್ ನಿಂದ ನಿಧಾನವಾಗಿ ಗಾಡಿ ಓಡಿಸುತ್ತಾ ಗಾಯತ್ರಿ ಜಪ ಮಾಡುತ್ತಾ ಹೊರಟೆ. (ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿ ಮಧ್ಯೆ ರಾತ್ರಿಯಲ್ಲಿ ಒಬ್ಬನೇ ಹೊರಗಿದ್ದದ್ದು ಅದೇ ಮೊದಲು).  ಗಾಳಿ ತುಸು ಮೆಲ್ಲನೆ ಬೀಸುತ್ತಿತ್ತು. ನಿರ್ಮಲ ವಾತಾವರಣ. ಸೂಜಿ ಬಿದ್ದರೂ ಸದ್ದು ಕೇಳಿಸಬಹುದೇನೋ ಅನ್ನುವಷ್ಟು ನಿಶ್ಯಬ್ಧ ವಾತಾವರಣ. ಮೈಯಲ್ಲಿ ತುಸು ನಡುಕ. ನನ್ನ ಬಣ್ಣಕ್ಕಿಂತಲೂ ಕಪ್ಪಾಗಿತ್ತು ಆ ರಾತ್ರಿ!

ಸಿನಿಮಾದಲ್ಲಿ ನೋಡಿದ ಭೂತಗಳು ಕಣ್ಣ ಮುಂದೆ ಅಕ್ಕ ಪಕ್ಕದಲ್ಲಿ ಸುಳಿದಾಡುತ್ತಿರುವ ಹಾಗೆ ಅನ್ನಿಸುತಿತ್ತು. ಗಾಯತ್ರಿ ಮಂತ್ರ ತಾರಕಕ್ಕೆ ಏರುತಿತ್ತು. ಮಧ್ಯೆ ಮಧ್ಯೆ ಭಯದ ಕಾರಣ ಮರೆತು ಹೋಗುತ್ತಿತ್ತು. ಮತ್ತೆ ನೆನಪಿಸಿಕೊಂಡು ಜಪ ಶುರುವಾಗುತ್ತಿತ್ತು. (ಉಪನಯನವಾದಾಗ ಗುರುಗಳು ಹೇಳಿಕೊಟ್ಟಿದ್ದರು.. ಬೇಸರವಾದಾಗ, ಭಯವಾದಾಗ, ಏನೂ ಮಾಡಲು ತೋಚದಾದಾಗ ಗಾಯತ್ರಿ ಮಂತ್ರ ನೆನಪಿಸಿಕೋ ಅಂತ)

ಮಂತ್ರವನ್ನು ಅದೆಷ್ಟು ಬಾರಿ ಹೇಳಿಕೊಂಡೇನೋ ಅರಿವಿಲ್ಲ.. ಅನತಿ ದೂರದಲ್ಲಿ ಒಂದು ಲಾರಿ ಸಾಗುತಿತ್ತು. ಸರಿ ಅದರ ಹಿಂದೆಯೇ ಹೋಗೋಣ ಅಂತ ಹೋಗುತ್ತಿದ್ದೆ.

ನನ್ನ ಹಣೆಬರಹ.. ಆ ಲಾರಿ ಸ್ವಲ್ಪ ದೂರ ಸಾಗಿ ಒಂದು ಕಟ್ಟುತ್ತಿದ್ದ ಕಟ್ಟಡದ ಬಳಿ ನಿಂತು ಬಿಟ್ಟಿತು.
ಗೆಳೆಯರನ್ನೆಲ್ಲ ಬಯ್ದುಕೊಂಡು, ಪ್ರಾಯಶಃ ನನ್ನ ನಿರ್ಧಾರ ತಪ್ಪಾಯಿತು. ಮೊದಲು ಸಿನೆಮಾಕ್ಕೆ ಹೋಗಬಾರದಿತ್ತು, ನಂತರ ದಾಬದ ಊಟ, ಕಡೆ ಪಕ್ಷ ಗೆಳೆಯರ ಮನೆಯಲ್ಲೇ ಉಳಿದುಬಿಡಬೇಕಿತ್ತು.. ಛೆ ನನ್ನ ಅವಿವೇಕತನ.. ಹೀಗೆ ನನ್ನನ್ನೇ ಹಳಿದುಕೊಳ್ಳುತ್ತಾ ಗಿರಿನಗರ ತಲುಪಿದೆ. ಅಲ್ಲಿಂದ ಹೊಸಕೆರೆಹಳ್ಳಿ ಕ್ರಾಸ್ ರಸ್ತೆಯಲ್ಲಿ ಸಾಗಿದರೆ ಮೈಸೂರು ರಸ್ತೆ ಸಿಗುತ್ತಿತ್ತು. ಅಲ್ಲಿಂದ ವಿಜಯನಗರದ ಮನೆ ಕೇವಲ ಎರಡು ಕಿ.ಮಿ.ಗಳು.

ವಿಧಿಯಿಲ್ಲ.. ಬೇರೆ ದಾರಿ ಕಾಣದ ಮುಂದುವರೆದೆ. ದೆವ್ವಗಳು ಮರದ ಮೇಲೆ ಕೂತು ನನ್ನ ಕಡೆ ಕೈ ತೋರಿಸಿ ಕುಹಕ ನಗೆ ಬೀರಿದಂತೆ ಕಂಡಿತು. ಜಪ ಜೋರಾಯಿತು.. ಇನ್ನಷ್ಟು ದೆವ್ವಗಳು ದಾರಿಯಲ್ಲಿ ನನ್ನ ಹೆಸರು ಕೂಗಿದಂತೆ ಭಾಸವಾಯಿತು.

ಢವಗುಟ್ಟುವ ಎದೆಯ ಬಡಿತ ಜೊತೆಯಲ್ಲಿ ಮುಂದೆ ಸಾಗಿದೆ. ಮೈ ಬೆವರಲು ಶುರುವಾಯಿತು, ಕೈ ನಡುಕ ಹತ್ತಿತು, ಕಾಲುಗಳು ಅದುರಲು ಶುರುಮಾಡಿದವು. ಭಯದಿಂದ ನೀರು ಆವಿಯಾದ ತುಟಿಗಳು ಜಪ ಮಾಡಲು ನಿರಾಕರಿಸಿದವು. ಸುಮಾರು ೫೦ ಮೀಟರುಗಳಷ್ಟು ದೂರದಲ್ಲಿ ಹತ್ತಾರು ದೇಹಗಳು ಕೈಯಲ್ಲಿ ಬಲೂನ್ ಹಿಡಿದು ಕೇಕೆ ಹಾಕುತ್ತ, ಕುಣಿಯುತ್ತಾ ಬರುತಿದ್ದವು.

"ಅಯ್ಯೋ ದೇವರೇ. ನನ್ನ ಅವಿವೇಕವನ್ನು ಮನ್ನಿಸಿಬಿಡು. ಈ ದೆವ್ವಗಳಿಂದ ನನ್ನನ್ನು ರಕ್ಷಿಸು" ಎಂದು ಬೇಡಿಕೊಳ್ಳುತ್ತಾ ನಿಧಾನವಾಗಿ ಮುಂದುವರೆದೆ. ನನ್ನ ಕಡೆ ವಕ್ರ ದೃಷ್ಟಿ ಬೀರುತ್ತಾ, ಹಲ್ಲು ಕಿರಿಯುತ್ತಾ, ಕೈ ತೋರಿಸಿಕೊಂಡು ನಗುತ್ತಾ ಆ ದೇಹಗಳು ನನ್ನನ್ನು ದಾಟಿ ಹಿಂದೆ ಹೋದವು.

ನಿಟ್ಟುಸಿರು ಬಿಡುತ್ತಾ ಮೈಸೂರು ರಸ್ತೆಗೆ ಬಂದೆ. ನನ್ನ ಹೃದಯ ಒಂದು ಕ್ಷಣ ನಿಂತೇ ಬಿಟ್ಟಿತು. ಅಲ್ಲಿನ ದೃಶ್ಯವನ್ನು ನೋಡಿ ಕಣ್ಣುಗಳ ರೆಪ್ಪೆ ಕೂಡ ಹಾಗೆಯೇ ಕೆಲ ಕ್ಷಣಗಳು ನಿಂತು ಬಿಟ್ಟವು. ಬಾಯಿಂದ ಮಂತ್ರದ ಶಬ್ಧಗಳು ಇಲ್ಲಾ, ಗಾಡಿ ಸದ್ದು ನನಗೆ ಕೇಳಿಸುತ್ತಿಲ್ಲ!

ಸಾವರಿಸಿಕೊಂಡು ನೋಡಿದೆ. ದೊಡ್ಡ ತೇರು, ಜನ ಸಾಗರ, ಪೊಲೀಸರು ಜನಗಳಿಗೆ ಹೋಗಿ ಹೋಗಿ ಬೇಗ ಹೋಗಿ ಎಂದು ಜನಸಾಗರವನ್ನು ಸರಿಸುತ್ತಿದ್ದರು. ಶ್ರೀರಾಮನವಮಿ ಪ್ರಯುಕ್ತ ತೇರು ಎಳೆದು ಮುಗಿದಿದ್ದರೂ.... ..  ಜನಗಳು ಅಲ್ಲಿ ಇಲ್ಲಿ ಓಡಾಡುತ್ತಾ ತಿಂಡಿ ತಿನಿಸುಗಳನ್ನು ತಿನ್ನುತ್ತಾ, ಅದು ಇದು ನೋಡುತ್ತಿದ್ದರು.

ಶ್ರೀ ರಾಮನಿಗೆ ಮನದಲ್ಲಿ ನಮಿಸಿ, ಪವನ ಸುತ ಹನುಮಂತನಿಗೆ ಮನದಲ್ಲಿ ನಮಸ್ಕರಿಸಿ ಇಂದು ನನ್ನನ್ನು ರಕ್ಷಿಸಿದೆ ಎಂದೆ.

ಭರ್ರನೆ ವಿಜಯನಗರದ ಕಡೆಗೆ ಓಡಿತು ಗಾಡಿ.

"ನಾನು ಶ್ರೀಕಾಂತ" ಎಂದೇ

ಬಾಗಿಲು ತೆರೆದು "ಯಾಕೋ ಇಷ್ಟೊತ್ತಲ್ಲಿ ಬಂದೆ. ಅಲ್ಲೇ ಗೆಳೆಯರ ಮನೆಯಲ್ಲಿ ಇರಬಾರದಿತ್ತೆ. ಈ ಸರಿ ಹೊತ್ತಿನಲ್ಲಿ ಹಾಗೆಲ್ಲ ಬರಬಾರದು ಆಯ್ತಾ" ಅಂತ ಹುಸಿ ಮುನಿಸಿನಿಂದ ಗದರಿ, "ಊಟ ಮಾಡಿದೆಯ?"ಅಂದ್ರು ಅಣ್ಣ (ನನ್ನ ಅಪ್ಪ)

ಎಲ್ಲಿ ಹೋಗಿದ್ದೆ, ಏನು ಮಾಡುತಿದ್ದೆ ಎನ್ನುವ ಪ್ರಶ್ನೆಗಳ ಸುರಿಮಳೆ ನಿರೀಕ್ಷಿಸಿದ್ದ ನನಗೆ ಅವರ ಮಾತುಗಳಿಂದ ಹೃದಯ ತುಂಬಿ ಬಂತು. ತಂದೆಗೆ ಮಕ್ಕಳ ಮೇಲೆ ನಂಬಿಕೆಯಿದ್ದಾಗ ಅವರ ಹೆಸರಿಗೆ ಮಸಿಬಳಿಯುವ ಕೆಲಸ ಮಾಡೋಲ್ಲ ಎನ್ನುವ ತತ್ತ್ವ ನನ್ನ ಅಪ್ಪನದು!

(೨೦ನೆ ಏಪ್ರಿಲ್ ೨೦೧೩ ರ ಶನಿವಾರ ಗಾಳಿ ಅಂಜನೇಯ ದೇವಸ್ಥಾನದ ಹತ್ತಿರ ನಿಂತಿದ್ದ ಜನಸಾಗರ, ತೇರು, ಕಡಲೆ ಪುರಿ, ಬತ್ತಾಸು ಇವನ್ನೆಲ್ಲ ನೋಡಿ ಮನಸ್ಸು ೧೪ ವರ್ಷಗಳ ಹಿಂದೆ ನಡೆದಿದ್ದ ಈ ಪ್ರಸಂಗವನ್ನು ಮತ್ತೆ ಕಣ್ಣ ಮುಂದೆ ತಂದೊಡ್ಡಿತು. ಆ ಪ್ರಸಂಗವಾದ ನಂತರ ಅನೇಕ ಬಾರಿ ಮಧ್ಯ ರಾತ್ರಿಯ ನಂತರ ಓಡಾಡಿದಿದ್ದೇನೆ, ಕಾಡಲ್ಲಿ ಓಡಾಡಿದ್ದೇನೆ, ಬೆಟ್ಟ ಗುಡ್ಡಗಳಲ್ಲಿ ಮಲಗಿದ್ದೇನೆ. . ಆದರೆ ಇವತ್ತಿಗೂ ಅವತ್ತಿನ ಕ್ಷಣ ನೆನೆದರೆ ಮೈ ತುಸು ಕಂಪಿಸುವುದು ಸುಳ್ಳಲ್ಲ)

Wednesday, April 10, 2013

ಎಸ್ ಪಿ.... ಎಸ್ ಪಿ... ಹ್ಯಾಪಿ ಬರ್ತ್ಡೇ!!!

"ಅಗೋ ನೋಡು ಆ ನದಿಯಲ್ಲಿ ಒಂದು ಎತ್ತರದ ಅಟ್ಟಣಿಗೆ ಕಾಣುತ್ತಿದೆಯಾ ? ಅಲ್ಲಿ ಕಾಲು ಇಳಿ ಬಿಟ್ಟು ಕುಳಿತರೆ ಪಾದ ಮುಳುಗುವಷ್ಟು ನೀರು ಕಾಲಿಗೆ ತಾಕುತ್ತೆ"

ಅಚಾನಕ್ಕಾಗಿ ಧ್ವನಿ ಬಂದ ಕಡೆ ತಿರುಗಿತು ಕಣ್ಣುಗಳು.  ಅನತಿ ದೂರದಲ್ಲಿ ಪಟ ಪಟ ಹೆಜ್ಜೆ ಹಾಕುತ್ತ ಒಂದು ಪುಟಾಣಿ ಬರುತ್ತಿತ್ತು . ಸರಿ ನೋಡೋಣ ಏನು ಮಾಡುತ್ತಾರೆ ಅಂತ ಅಲ್ಲೇ ಮರದ ಬದಿಯಲ್ಲಿದ್ದ ಒಂದು ಒಂಟಿ ಬೆಂಚಿನ ಮೇಲೆ ಕುತೂಹಲ ಭರಿತ ಕಣ್ಣುಗಳಿಂದ ಆ ಪುಟಾಣಿಯ ಚಲನವಲನ ನೋಡುತ್ತಾ ಕುಳಿತೆ!

ಆ ಸುಂದರ ಪರಿಸರ, ದಿನವಿಡೀ ಸುತ್ತಾಡಿ ಇನ್ನು ಇಲ್ಲೇ ಇದ್ದು ಬಿಡುತ್ತೇನೆ ಎನ್ನುವ ಹಾಗೆ ಕುಳಿತ ಪ್ರಕೃತಿ ಮಾತೆಯ ಸೌಂದರ್ಯ ರಾಶಿಯೇ ಅಲ್ಲಿ ಇಳಿ ಬಿದ್ದಿತ್ತು. ಎತ್ತ ನೋಡಿದರೂ ಹಸಿರು, ಜುಳು ಜುಳು ಹರಿವ ಝರಿಗಳು, ಚಿಲಿ ಪಿಲಿ  ಸದ್ದು ಮಾಡುತ್ತಾ ಅಲ್ಲಿನ ವಾತಾವರಣಕ್ಕೆ ಸಂಗೀತಮಯ ಹಿಮ್ಮೇಳ ಒದಗಿಸುತ್ತಿತ್ತು.

ಚಿತ್ರಕೃಪೆ - ಅಂತರ್ಜಾಲ
ನನಗೆ ಆಶ್ಚರ್ಯ!...  ಪುಟಾಣಿ ನಿಧಾನವಾಗಿ ಅಟ್ಟಣಿಗೆಯ ತನಕ ನೆಡೆದು ಹೋಗಿ, ಕೂತು.. ಪಾದ ಮುಳುಗುವಷ್ಟು ನೀರಿನಲ್ಲಿ ಕಾಲನ್ನು ಬಡಿಯುತ್ತ ಗಿಲಿ ಗಿಲಿ ನಗುತ್ತಾ ಕೈಬೀಸಿತು!

ಅಲ್ಲೇ ಆಡುತ್ತಿದ್ದ ಆ ಪುಟಾಣಿಯ ತಮ್ಮ... "ಒಹ್ ಅಕ್ಕ ಕರೆಯುತ್ತಿದ್ದಾಳೆ... ಬಂದೆ ಅಕ್ಕಾ!" ಎನ್ನುತ್ತಾ ಓಡುತ್ತಾ ಬಂದಿತು.

"ಏನಕ್ಕಾ ಕರೆದೆಯಲ್ಲ?" ಎಂದಿತು ಆ ಮರಿ ಪುಟಾಣಿ!
ಚಿತ್ರ ಕೃಪೆ - ಅಂತರ್ಜಾಲ

"ಏನಿಲ್ಲ ಕಣೋ!...ಇಲ್ಲಿ ಕೂತು, ಸೂರ್ಯ ಹುಟ್ಟುವುದನ್ನು ನೋಡುತ್ತಾ... ದೂರದೆ ಆಗಸದೆ ತೇಲಿ ಬರುವ ಮೋಡಗಳಲ್ಲಿ ನಮ್ಮ ಕನಸುಗಳನ್ನು ಹೇಳಿಕೊಂಡು, ಅದು ನಮ್ಮತ್ತ ಸಾಗಿ ಬರುವುದನ್ನು ನೋಡುವುದು ಒಂದು ಖುಷಿ... ನೀನು ಜೊತೆಯಿರು ಅಂತ ಕರೆದೆ" ಅಂದಳು ಆ ಪುಟ್ಟಿ!

ಚಿತ್ರಕೃಪೆ - ಅಂತರ್ಜಾಲ 
"ಓಹ್ ಅಷ್ಟೇನಾ!.. ಸರಿ... ನಿನ್ನ ಜೊತೆಯಿದ್ದಾಗ ನೀನು ಆಡುವ ಪ್ರತಿಯೊಂದು ಪದವು ಒಂದು ಕಾವ್ಯ ಅಕ್ಕಾ"  ಅಂದಾ ಆ ಪುಟಾಣಿ ಹುಡುಗ!

ಆ ಪ್ರಶಾಂತ ವಾತಾವರಣವನ್ನು ಭೇಧಿಸಿ ಬರುವಂತೆ ದೂರದಲ್ಲಿ ಉಗಿಬಂಡಿಯ ನಾದ... ಹಸಿರು ಹೊದ್ದ ಪ್ರಕೃತಿ ಮಾತೆಯ ಗರ್ಭವನ್ನು ಸೀಳಿ ಬರುವಂತೆ ವೇಗವಾಗಿ ಹತ್ತಿರ ಬರುತಿತ್ತು.

ಚಿತ್ರಕೃಪೆ - ಅಂತರ್ಜಾಲ
ನಾ ಹೊತ್ತು ಕಳಿಸಿದ್ದ ಒಂದು ಪಾರ್ಸೆಲ್ ಇದೆ ರೈಲಿನಲ್ಲಿ ಬರಬೇಕಿತ್ತು.. ಹಾಗಾಗಿ ಅದನ್ನು ತರಲು ಎದ್ದು ನಿಂತೇ!

ಅಷ್ಟರಲ್ಲಿ ಆ ಪುಟಾಣಿ ಹುಡುಗ ಸ್ಟೇಷನ್ ಮಾಸ್ಟರ್ ಬಳಿ ಓಡಿ ಹೋಗಿ "ಸರ್ ನಾನೇ ಪದ್ಮನಾಭ... ಒಂದು ಪಾರ್ಸೆಲ್ ನನ್ನ ಹೆಸರಲ್ಲಿ ಬರಬೇಕಿತ್ತು.." ಎಂದನು!

ಸ್ಟೇಷನ್ ಮಾಸ್ಟರ್ "ಹೌದು ಮರಿ! ಬಂದಿದೆ... ಹಾಗೆಯೇ ನಿನ್ನ ಅಕ್ಕನನ್ನು ಕರೆ... ಅಕ್ಕನಿಗೆ ಒಂದು ದೊಡ್ಡ ಪಾರ್ಸೆಲ್ ಬಂದಿದೆ... ಅಗೋ ಅಲ್ಲಿ ಒಬ್ಬರು ಬರ್ತಾ ಇದ್ದಾರಲ್ಲ.. ಅವರು ಕೊಡುತ್ತಾರೆ.. ತೆಗೆದುಕೋ" ಅಂದರು!

ಅಷ್ಟರಲ್ಲಿ ನಾನು ನಿಧಾನವಾಗಿ ಹೆಜ್ಜೆ ಇಡುತ್ತಾ ಕಛೇರಿಗೆ ಬಂದೆ.. ಆ ಪುಟಾಣಿ ಹುಡುಗ.. "ಸರ್ ಸರ್ ಬೇಗ ಪಾರ್ಸೆಲ್ ಕೊಡಿ ಸರ್.. ಇದು ಅದರ ರಸೀತಿ.. " ಅಂದ

ಅಲ್ಲಿಯೇ ಇದ್ದ ಪಾರ್ಸೆಲ್ಗಳಲ್ಲಿ ಅವನ ಹೆಸರನ್ನು ಹುಡುಕಿ "ತಗೋ ಕಂದ... ನಿನ್ನ ಅಕ್ಕ ಎಲ್ಲಿ?"

"ಅಕ್ಕಾ.. ಅಕ್ಕಾ ಬೇಗ ಬಾ.. ನಿನ್ನ ಹೆಸರಲ್ಲಿ ಒಂದು ಪಾರ್ಸೆಲ್ ಇದೆಯಂತೆ...!" ಅಂತ ಕೂಗಿದ

"ಬಂದೆ ಕಣೋ.. ನಂಗೆ ಯಾರೋ ಪಾರ್ಸೆಲ್ ಕಳಿಸಿರೋದು?" ಎನ್ನುತ್ತಲೇ ನಿಧಾನವಾಗಿ ಓಡಿ ಬಂದಳು ಪುಟ್ಟಿ!

ನಾನು ಆ ಪುಟ್ಟಿಯ ಹೆಸರಲ್ಲಿದ್ದ ಪಾರ್ಸೆಲ್ ಕೊಟ್ಟೆ... ಅದನ್ನು ನೋಡುತ್ತಲೇ ಕೆನ್ನೆಯುಬ್ಬಿಸಿಕೊಂಡು
"ಬೇಡ ಬೇಡ ಎಂದರೂ... ಇವರೆಲ್ಲಾ ಸೇರಿ ಒಂದು ಪಾರ್ಸೆಲ್ ಕಳಿಸೇ ಬಿಟ್ರಾ... ಇರಲಿ ಇವರೆನ್ನೆಲ್ಲ ಒಂದು ಕೈನೋಡ್ಕೊತೀನಿ" ಅನ್ನುತ್ತಾ ತೋಳು ಮಡಿಸುತ್ತಾ ಇದ್ದಳು, ಅಷ್ಟರಲ್ಲಿ

"ಎಸ್ ಪಿ  ... ಹುಟ್ಟು ಹಬ್ಬದ ಶುಭಾಶಯಗಳು... " ಎನ್ನುತ್ತಾ ನಾನು ಒಂದು ದೊಡ್ಡ ಚಾಕ್ಲೆಟನ್ನು ಕೊಟ್ಟೆ..

ರೈಲ್ವೆ ಸ್ಟೇಷನ್ನಲ್ಲಿದ್ದವೆರಲ್ಲ ಹುಟ್ಟು ಹಬ್ಬದ ಶುಭಾಶಯಗಳು! ಎಂದು ಹಾರೈಸುತ್ತಾ ರೈಲನ್ನು ಹತ್ತಿ ನಿಂತರು.

ರೈಲು ಕೂಡ ಚುಕ್ ಬುಕ್ ಎನ್ನದೆ "ಎಸ್ ಪಿ....  ಎಸ್ ಪಿ... ಹ್ಯಾಪಿ ಬರ್ತ್ಡೇ... ಎಸ್ ಪಿ....  ಎಸ್ ಪಿ... ಹ್ಯಾಪಿ ಬರ್ತ್ಡೇ..... ಎಸ್ ಪಿ....  ಎಸ್ ಪಿ... ಹ್ಯಾಪಿ ಬರ್ತ್ಡೇ" ಎನ್ನುತ್ತಾ ಅಲ್ಲಿಂದ ಹೊರಟಿತು.

ಶುಭಾಶಯಗಳ ಕರತಾಡನ !
ಪುಟ್ಟಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಮತ್ತೆ ಅಟ್ಟಣಿಗೆಯ ಬಳಿ ನಡೆದಳು.. ಆಶ್ಚರ್ಯ ಬಜ್ಜಿಗರು ಗುಂಪಿನ ಪ್ರತಿಯೊಬ್ಬರೂ ಅಲ್ಲಿ ಚಪ್ಪಾಳೆ ತಟ್ಟುತ್ತ "ಸಂಧ್ಯಾ ಪುಟ್ಟಿಗೆ ಹುಟ್ಟು ಹಬ್ಬದ ಶುಭಾಶಯಗಳು!!!" ಎಂದು ಕೂಗುತ್ತಾ ಕುಣಿಯುತ್ತಿದ್ದರು!

ಸಂತಸದಿಂದ ಮೂಕಳಾದ ಆ ಪುಟ್ಟಿ ಅಲ್ಲಿಯೇ ಇದ್ದ ನನಗೆ ಒಂದು ಗುದ್ದು ಕೊಟ್ಟು "ಅಣ್ಣಾ ಇದೆಲ್ಲ ನಿಮ್ಮದೇ ಸಿದ್ಧತೇನಾ?..". ಅಂದಳು!

"ನಮ್ಮೆನ್ನೆಲ್ಲ ಅಣ್ಣ ಅಂತೀಯ... ನಿಮ್ಮ ಕುಟುಂಬದ ಒಂದು ಭಾಗವೇ ಆಗಿರುವಾಗ ಇದೆಲ್ಲ ನಮ್ಮ ಕರ್ತವ್ಯ ಅಲ್ಲವೇ ಎಸ್ ಪಿ"  ಎಂದೇ!

ಹೆಜ್ಜೆ ಇಡುತ್ತ ಬಂದ ಎಸ್ ಪಿ ಯ ಅಪ್ಪ, ಅಮ್ಮ,  ಅಕ್ಕ, ಭಾವ, ತಮ್ಮ,... "ಸನ್ ಪುಟ್ಟಾ... ಅದಕ್ಕೆ ಹೇಳಿದ್ದು ಬ್ಲಾಗ್ ಲೋಕ ನಿನಗೆ ಇನ್ನೊಂದು ಕುಟುಂಬವೇ ಆಗಿ ಬಿಟ್ಟಿದೆ... ನೋಡಿದೆಯ ನಮಗೂ ಹೇಳದೆ ಇದೆಲ್ಲ ಮಾಡಿದ್ದಾರೆ!!!" ಎಂದರು

ಆನಂದ ಭಾಷ್ಪ ಸುರಿಸುತ್ತಾ ಪುಟ್ಟಿ ಕೈ ಜೋಡಿಸಿದಳು... ಸ್ವಲ್ಪ ನಗು.. ಸ್ವಲ್ಪ ಮುನಿಸು.. ಸ್ವಲ್ಪ ಭಾವುಕಳಾದ
ಎಸ್ ಪಿ.. ಮುಖವನ್ನು ಆ ಕಡೆ ತಿರುಗಿಸಿಕೊಂಡು ಆನಂದ ಭಾಷ್ಪವನ್ನು ಸುರಿಸಿದಳು.. !

ಭಾವುಕಳಾದ ಎಸ್ ಪಿ !
ಅವಳ ಮೊಬೈಲ್ ನಲ್ಲಿ ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು ನಮ್ಮೆಲ್ಲರನ್ನೂ ಮತ್ತೆ ಬಂಧಿಸಿಹುದೋ.... ಕಾಣೆ" ಹಾಡು ತಂಗಾಳಿಯಂತೆ ತೇಲಿ ಬರುತಿತ್ತು!

-----------------------------------------------------------------------------------------------------------

ಬ್ಲಾಗ್ ಲೋಕದ ಮಿತ್ರರು ಕರಿಘಟ್ಟಕ್ಕೆ ಪ್ರವಾಸ ಹೋದಾಗ, ಸದಾ ನಗು ನಗುತ್ತಿರುವ ಮುದ್ದು ಪುಟಾಣಿಯ ಪರಿಚಯ ಆಯಿತು. ಶ್ರೀ ಅಣ್ಣ ಅನ್ನುತ್ತಲೇ ಹತ್ತಿರವಾದ ಹುಡುಗಿ.. ತನ್ನ "ಸಂಧ್ಯೆಯಂಗಳದಿ" ಅಂಗಳದಲ್ಲಿ ಹಾಕಿದ  ಪ್ರತಿಯೊಂದು ರಂಗವಲ್ಲಿಯೂ  ಸೂರ್ಯನ  ಕಿರಣದಷ್ಟೇ ಬಣ್ಣಗಳನ್ನು, ಭಾವಗಳನ್ನು ಹೊತ್ತು ತರುತ್ತವೆ.  ನಿಧಾನವಾಗಿ ತೂಗಿ ಆಡುವ ಮಾತುಗಳಿಂದ ಗಮನ ಸೆಳೆಯುವ ಹುಡುಗಿ... ತಂಗಿ ಇದ್ದರೇ ಹೀಗೆ ಇರಬೇಕು ಎನ್ನುವಂತೆ ಆಪ್ತಳಾಗಿಬಿಡುತ್ತಾಳೆ. ಅವಳ ಮಾತುಗಳು, ಕಷ್ಟ ಸುಖಗಳನ್ನು ಹೇಳಿಕೊಳ್ಳುವ ಭಾವ,  ಪ್ರಾಯಶಃ ದೇವರು ನನಗಾಗಿ ಆರಿಸಿ ಕೊಟ್ಟ ಅನೇಕ ತಂಗಿಯರಲ್ಲಿ ಇವಳು ಒಬ್ಬಳು ಅನ್ನುವಂತೆ ಮಾಡುತ್ತದೆ. ಕಥೆ, ಕವನ, ಚಿತ್ರಕಲೆ, ಕಾಗದದಲ್ಲಿ ಬೊಂಬೆಗಳನ್ನು ಮಾಡುವುದು ಒಂದೇ ಎರಡೇ...
ಸಕಲಕಲಾವಲ್ಲಭೆ  ಎನ್ನಬಹುದು!.  ಭಾವಕ್ಕೆ ಅಭಾವ ಇಲ್ಲ ಅನ್ನುತ್ತಾರೆ.   ಎಸ್ ಪಿ ನಿಜಕ್ಕೂ ಅವರ ಮಾತಾ ಪಿತೃಗಳ ಒಂದು ಅನರ್ಘ್ಯ ರತ್ನವೇ ಸರಿ. ಊರಲ್ಲಿ ಅಪರೂಪದ ಮಂತ್ರ ಘೋಷಗಳ ಆಶೀರ್ವಾದ ಪಡೆದ ಈ ಪುಟ್ಟಿಯ ಎಲ್ಲಾ  ಕನಸುಗಳ ನನಸಾಗಲಿ.. ನನಸಾದ ಕನಸುಗಳು ಚಿಗುರೊಡೆಯಲಿ... ಸದಾ ನಗು ನಗುತಿರುವ ಈ ಪುಟ್ಟಿ,  ಸದಾ ಅರಳು ಮಲ್ಲಿಗೆಯಂತೆ ಘಮ ಘಮಿಸಲಿ ಎಂದು ಹಾರೈಸುತ್ತಾ ..  ಪ್ರೀತಿಯ ಎಸ್ ಪಿ ಗೆ ಹುಟ್ಟು ಹಬ್ಬದ ಶುಭಾಶಯಗಳು..

ಯುಗಾದಿಯ ದಿನದಂದೇ ಬಂದಿರುವ ಈ ಜನುಮ ದಿನ,  ಪುಟ್ಟಿಯ ಜೀವನದಲ್ಲಿ ಮಾವಿನ ಎಲೆಯಂತೆ ಹಸಿರಾಗಿ .. ಬೆಲ್ಲದಂತೆ ಸವಿಯಾಗಿ ಇರಲಿ!

ಎಸ್ ಪಿ ಹುಟ್ಟು ಹಬ್ಬದ, ಯುಗಾದಿಯ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳು!

(ಎಸ್ ಪಿ ಬರೆದ ಒಂದು ಲೇಖನದಲ್ಲಿ "ಅಗೋ ನೋಡು ಆ ನದಿಯಲ್ಲಿ ಒಂದು ಎತ್ತರದ ಅಟ್ಟಣಿಗೆ ಕಾಣುತ್ತಿದೆಯಾ ? ಅಲ್ಲಿ ಕಾಲು ಇಳಿ ಬಿಟ್ಟು ಕುಳಿತರೆ ಪಾದ ಮುಳುಗುವಷ್ಟು ನೀರು ಕಾಲಿಗೆ ತಾಕುತ್ತೆ" ಈ ಸಾಲುಗಳು ತುಂಬಾ ಕಾಡಿದ್ದವು.. ಅವಳ ಅನುಮತಿ ಪಡೆದು ಆ ಸಾಲುಗಳನ್ನು ಕೊಂಚ ಹಿಗ್ಗಿಸಿದ್ದೇನೆ.. ಈ ಲೇಖನದ ಆರಂಭಕ್ಕೆ ಸುಂದರ ಸಾಲುಗಳನ್ನು ಕೊಟ್ಟ ಎಸ್ ಪಿ ನಿನಗೆ ಧನ್ಯವಾದಗಳು)

Monday, April 8, 2013

ಕೋರವಂಗಲ ಕುಟುಂಬದ ಒಂದೇ ಕಡೆಯಲ್ಲಿ ಎಲ್ಲರೂ - One Get-together!

ಯಥಾ ಪ್ರಕಾರ ದಿನಕರ ತನ್ನ ಮನೆಯಲ್ಲಿದ್ದ ದಿನಸೂಚಿಯ ಇನ್ನೊಂದು ಚೀಟಿಯನ್ನು ತಿರುವಿ ಹಾಕಿದ. ಅರೆ ಅರೆ ಎನುತ್ತಾ ನೋಡಿದಾಗ ಅವನ ದಿನವೇ ಮೂಡಿ ಬಂದಿತ್ತು ಬಂದಿತ್ತು.

ಕೈಲಾಸದಲ್ಲಿ ಗಣಪನಿಗೆ ಎಲ್ಲರೂ ಹುಡುಕಾಡುತ್ತಿದ್ದರು. ಗಣಪನು ಇರಲಿಲ್ಲ ಅವನ ವಾಹನವೂ ಕಾಣುತ್ತಿರಲಿಲ್ಲ. ಪಾರ್ವತಿ ಓಡುತ್ತಾ ಬಂದಾಗ ಶಿವ ತಡೆದು .. ಶಿವ ಹಸನ್ಮುಖನಾಗಿ, 


ತಡಿ ಪಾರ್ವತಿ..ಅಲ್ಲಿ ನೋಡು
"ತಡಿ ಪಾರ್ವತಿ..ಅಲ್ಲಿ ನೋಡು . ನಮ್ಮ ರಂಗಸ್ವಾಮಿಯವರ ವಂಶದ ಕುಡಿಗಳು ಒಂದೇ ಸೂರಿನಡಿ ಸಂಧಿಸುತ್ತಿವೆ. ಅದಕ್ಕಾಗಿ ಅವರಿಗೆ ಸ್ವಾಗತ ನೀಡಲು ಗಣಪ ಹಲಗೆಯ ಹಾಳೆಯ ಮೇಲೆ ತನ್ನ ಮೂಷಿಕವಾಹನವನ್ನು ಕೂರಿಸಿಕೊಂಡು ಮೂಡುತ್ತಿದ್ದಾನೆ"
ಗಣಪನನ್ನು ಮೂಡಿಸಿದ ವಿಷ್ಣು!

ಕೋರವಂಗಲದ ಕುಟುಂಬಕ್ಕೆ ಸ್ವಾಗತ!
---------------------------------------------------------------------------------
ನಿನ್ನೆ ಏಪ್ರಿಲ್ ೭ ೨೦೧೩ , ಹೊಸ ಸಂವತ್ಸರಕ್ಕೆ ಇನ್ನು ಕೇವಲ ನಾಲ್ಕೇ ದಿನಗಳು ಇದ್ದವು. ಆದರೆ ಕೋರವಂಗಲದ ಕುಟುಂಬದಲ್ಲಿ ಒಂದು ಹೊಸ ಸಂವತ್ಸರಕ್ಕೆ  ನಾಂದಿ ಹಾಡಲು ದೊಡ್ಡಪ್ಪ, ಚಿಕ್ಕಪನವರ ಕುಟುಂಬಗಳು ಸಜ್ಜಾಗಿದ್ದವು. 


ಕೋರವಂಗಲದ ಕುಡಿಗಳು ಸರಿ ಸುಮಾರು ೧೨  ಘಂಟೆಯ ಹೊತ್ತಿಗೆ ಒಂದೊಂದೇ ಕುಟುಂಬ ಸಾಗರದ ಅಲೆಗಳಂತೆ ಬಂದು ವಿಜಯನ ಮನೆಯಲ್ಲಿ ಸೇರುತ್ತಿದ್ದರು. ಅವನ ಲ್ಯಾಪ್-ಟಾಪ್ ನಲ್ಲಿ ಬೆರೆತ ಜೀವ ಚಿತ್ರದ ಹಾಡು ಮೆಲುದನಿಯಲ್ಲಿ ಕೇಳುತಿತ್ತು.

"ಒಂದಾಗಿ ಬಾಳುವ
ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ
ಒಂದಾಗಿ ಬಾಳುವ"

ಎಲ್ಲರೂ ಒಂದು.... ಎಲ್ಲರಲ್ಲೂ ಒಂದು ಎಂಬ ಭಾವವನ್ನು ಭಿತ್ತಿ ಬೆಳೆಸಿದ್ದ ರಂಗಸ್ವಾಮಿ ದಂಪತಿಗಳ ವಂಶದಲ್ಲಿ ಒಬ್ಬರನ್ನು ಒಬ್ಬರು ಭೇಟಿ ಮಾಡುವುದು, ಹರಟೆ ಹೊಡೆಯುವುದು ಮಾಮೂಲಿಯಾಗಿತ್ತು. ಆದರೆ ಎಲ್ಲರನ್ನೂ ಒಂದೇ ಛಾವಣಿಯ ಅಡಿಯಲ್ಲಿ ಸೇರಿಸಿ.. ಈ ಸುಸಂಧಿಯನ್ನು ನಿರಂತರ ಕಾರ್ಯಕ್ರಮವನ್ನಾಗಿ ಮಾಡಬೇಕೆನ್ನುವ ನಮ್ಮೆಲ್ಲರ ಹಂಬಲವನ್ನು ಕಾರ್ಯಕ್ಕೆ ಇಳಿಸಿದ ಕೀರ್ತಿ ವಿಜಯನಿಗೆ ಸೇರುತ್ತದೆ. 

ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಹಿರಿಯರ ಆಶೀರ್ವಾದ ಮುಖ್ಯ... ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಆ ಕಾರ್ಯಕ್ರಮದ ಯಶಸ್ಸು ಮುಂದಿನ ತಲೆಮಾರಿಗೂ ಹರಿಯಬೇಕು ಎನ್ನುವುದಾದರೆ ಮುಂದಿನ ಪೀಳಿಗೆಯ ಹರಿಕಾರರಾದ ಪುಟಾಣಿಗಳು ನಲಿಯಬೇಕು. ಆ ಸಂತಸ ಹೊಳೆಯಲ್ಲಿ ಮಿಂದೆದ್ದ ಪುಟಾಣಿಗಳು ನಿಜಕ್ಕೂ ಈ ಶ್ರಮಕ್ಕೆ ಅದ್ಭುತ ಚಾಲನೆ ನೀಡಿದರು ಎಂದರೆ ತಪ್ಪಾಗದು. 

ಕೆಲವೊಂದು ಸುಂದರ ಕ್ಷಣಗಳು ನಿಮಗಾಗಿ!
ನಮ್ಮನ್ನೆಲ್ಲ ಒಂದೇ ಕಡೆ ಸೇರಿಸಿಬಿಟ್ಟಿದ್ದಾರೆ ಹೆಂಗೋ ಗೊತ್ತಿಲ್ಲಪ್ಪಾ!

ನಾವೆಲ್ಲರೂ ಒಂದು!

ಚುನಾವಣೆಯಲ್ಲಿ ನಮ್ಮದೇ ಮತ ಇಲ್ಲವೇ ಮಠ! 

ನಾವೆಲ್ಲರೂ ನಮ್ಮೊಳಗೆಲ್ಲರು! 

ಹಲ್ಲು ಬಿಡೋದೇ ನಮ್ಮ ಕಾಯಕ!

ಸರಸ್ವತಿ ನಗರದಲ್ಲಿ ರಂಗನಾಥ! 
ಒಟ್ಟಾಗಿ ಕೂತು ಊಟ, ಹರಟೆ, ಕಷ್ಟ ಸುಖ ವಿಚಾರ ವಿನಿಮಯಗಳು, ಮುಂದಿನ ದಾರಿಯ ಬಗ್ಗೆ ಸೂಕ್ತ ಆಲೋಚನೆ ಹೀಗೆ ನಾನಾ ದಿಕ್ಕುಗಳಲ್ಲಿ ಯೋಚನಾ ಲಹರಿ ಸಾಗಿತ್ತು. 

ಅಜ್ಜ ಅಜ್ಜಿ ಬೀಜ ಬಿತ್ತಿ,  ನೀರು ಉಣಿಸಿ,  ಆರೈಕೆ ಮಾಡಿ ಬೆಳೆಸಿದ ಈ ಕೋರವಂಗಲದ ವೃಕ್ಷದಲ್ಲಿ ಸದಾ ಹಸಿರು, ಉಸಿರಿನ ಹೂವು ಹಣ್ಣುಗಳು ಸದಾ ಚಿಗುರೊಡೆಯುತ್ತಾ ಇರಲಿ ಎನ್ನುವ ಆಶಯದೊಂದಿಗೆ ಇಂದಿನ ಒಂದೇ ಕಡೆಯಲ್ಲಿ ಎಲ್ಲರೂ ಎನ್ನುವ ಕಾರ್ಯಕ್ರಮ ಸುಸೂತ್ರವಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಹೊರಟಿತು!!!
---------------------------------------------------------------------------------
ಆರಾಮಾಗಿ ಸೀಟಿ ಹೊಡೆಯುತ್ತಾ ಇಲಿಯ ಮೇಲೆ ಕೈಲಾಸಕ್ಕೆ ಬಂದ ಗಣಪನನ್ನು ಕಂಡ ಮಾತೆ ಪಾರ್ವತಿ.. 

"ಮಗು ಹೇಗಿತ್ತಪ್ಪ ನಿನ್ನ ಭೂಲೋಕದ ಪಯಣ?"

"ಅಮ್ಮಾ ಏನು ಹೇಳಲಿ.. ಪ್ರತಿ ಬಾರಿ ಭಾದ್ರಪದ ಶುಕ್ಲದ ಚೌತಿಯಂದು ಮಾಡುವ ಭೂಲೋಕ ಪಯಣಕ್ಕಿಂತ.. ಈ ಪಯಣ ಖುಷಿಕೊಟ್ಟಿತು. ಇದೆ ರೀತಿಯ ಕಾರ್ಯಕ್ರಮ ಕೋರವಂಗಲದ ಈ ತುಂಬು ಕುಟುಂಬದಲ್ಲಿ ಸದಾ ನಡೆಯುತ್ತಿರಲಿ ಎನ್ನುವ ಆಶೀರ್ವಾದ ಮಾಡಿ ಬಂದಿದ್ದೇನೆ... ತುಂಬಾ ಖುಷಿಯಾಗುತ್ತಿದೆ ಅಮ್ಮಾ"

"ಮಗು ಮುಂದಿನ ಬಾರಿ ನಮ್ಮನ್ನು ಕರೆದುಕೊಂಡು ಹೋಗು.. ನಾವು ಬರುತ್ತೇವೆ"

"ಖಂಡಿತ ಅಮ್ಮಾ.. ಅಪ್ಪ ನಾನು ನೀನು ಸುಬ್ರಮಣ್ಯ ಎಲ್ಲರೂ ಕೂಡಿಯೇ ಹೋಗೋಣ... ಅರೆ ಅರೆ ನನ್ನ ಲ್ಯಾಪ್-ಟಾಪ್ ನಲ್ಲಿ ಆಗಲೇ ಒಂದು ಸಂದೇಶ ಬಂದಿದೆ... ಇರು ನೋಡ್ತೀನಿ"

------------------------------------
From: Koravangala@affection.com
To : Koravangala@onebigtree.com
Bcc: ganesh@kailaasa.com


ಆತ್ಮೀಯ ಸಹೋದರರಿಗೆ ಹಾಗೂ ಎಲ್ಲಾ ಕುಟುಂಬ ಸದಸ್ಯರಿಗೆ 

ನಿಮ್ಮ ಅಮೂಲ್ಯವಾದ  ಸಮಯವನ್ನು ನಮ್ಮೊಂದಿಗೆ ಕಳೆದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು 

Thanks & Regards

ವಿಜಯವಾಣಿ 
Vijayanagar,
Bangalore - 560 040
-----------------------------------------

"ಓಹ್ ಇದು ವಿಜಯನ ಸಂದೇಶ.. ನನಗೂ ಕಳಿಸಿದ್ದಾನೆ... ಮಗು ಶುಭವಾಗಲಿ.. ನಿನ್ನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿ.. ನಿಮ್ಮೆಲ್ಲರ ಕುಟುಂಬದ  ಸಾಗರದಲ್ಲಿ ಸುಖ ಶಾಂತಿ ನೆಮ್ಮದಿಯ ಅಲೆಗಳು ಸದಾ ಬರುತ್ತಲೇ ಇರಲಿ!!!"

Monday, April 1, 2013

ನಸೀಮ ಮತ್ತು ಅವಳಿ ಮಕ್ಕಳು - ಒಂದು ಸುಂದರ ಸಮಾರಂಭ!!!

ಮಹಾಭಾರತ ಯುದ್ಧವನ್ನು ಸಂಜಯನ ಕಣ್ಣಲ್ಲಿ ನೋಡಿ ಬಳಲಿದ್ದ ಧೃತರಾಷ್ಟ್ರ...ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದಲ್ಲಿ ಕುಳಿತು ಶ್ರೀ ವೇದವ್ಯಾಸರನ್ನು ಪ್ರಾರ್ಥಿಸಿ  "ನನಗೆ ಯುದ್ಧವನ್ನು ನೋಡಿ ಸಾಕಾಗಿದೆ, ದಯಮಾಡಿ ಒಂದು ಒಳ್ಳೆಯ ಸಂಧರ್ಭವನ್ನು ನೋಡಿ, ಕೇಳಿ  ಅನುಭವಿಸುವ ಸುಯೋಗವನ್ನು ಕರುಣಿಸಿ ಗುರುದೇವ" ಎಂದು ಕೇಳುತ್ತಾನೆ

ಆಗ ವೇದವ್ಯಾಸರು ಪ್ರತ್ಯಕ್ಷರಾಗಿ "ಮಗು ಧೃತರಾಷ್ಟ್ರ, ನಾನು ನಿನಗೆ ಮತ್ತೆ ದಿವ್ಯದೃಷ್ಟಿಯನ್ನು ಕರುಣಿಸಲಾರೆ ಅಥವಾ ಸಂಜಯನನ್ನು ಕಳಿಸಲಾರೆ, ಆದರೆ ನಾಲ್ಕು ಕಣ್ಣುಗಳು ನಿನಗೆ ಒಂದು ಸುಂದರ ಸಮಾರಂಭದ ವಿವರಣೆಯನ್ನು ಕೊಡುವಂತೆ ಮಾಡಬಲ್ಲೆ"

"ಆಗಲಿ ಗುರುದೇವ  ಹೇಗೆ ಸರಿ ಅನ್ನಿಸುತ್ತೋ ಹಾಗೆ ಆಶೀರ್ವಾದ ಮಾಡಿ"

ವೇದವ್ಯಾಸರು ಅದೃಶ್ಯರಾಗಿ ಅವರ ಜಾಗದಲ್ಲಿ ಎರಡು ಜೊತೆ ಸುಂದರ ಕಣ್ಣುಗಳು ಮೂಡಿಬರುತ್ತವೆ.

"ಮಹಾರಾಜ.. ಇಂದು ನಿಮ್ಮನ್ನು ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ಕರ್ನಾಟಕ ಕ್ಷೇತ್ರೇ, ಬೆಂಗಳೂರು ನಗರೇ, ಸುಚಿತ್ರ ಫಿಲಂ ಸೊಸೈಟಿ ಸಭಾಂಗಣೇ... ಶ್ರೀ ನಟರಾಜು ಸೀಗೆಕೋಟೆ ಮರಿಯಪ್ಪ ಅವರ ಅವಳಿ ಮಕ್ಕಳ ತೊಟ್ಟಿಲು ಶಾಸ್ತ್ರ ಅಂದರೆ ನಾಮಕರಣಕ್ಕೆ ಕರೆದೊಯ್ಯುತಿದ್ದೇವೆ"

"ಪುಟಾಣಿಗಳೇ ಸ್ವಲ್ಪ ವಿವರಿಸಿ"

"ಮಹಾರಾಜ, ಬ್ಲಾಗ್ ಲೋಕದಲ್ಲಿ ಎಲೆ ಮರೆಯಲ್ಲಿ ಹಣ್ಣಾಗುತ್ತಿರುವ ಎಷ್ಟೋ ಸುಂದರ ಕಾಯಿಗಳನ್ನು ಲೋಕಕ್ಕೆ ಪರಿಚಯಿಸುತ್ತಿರುವ ಶ್ರೀ ನಟರಾಜು ಅವರು ಬರೆದ ಎರಡು ಪುಸ್ತಕಗಳು ಇಂದು ಲೋಕಾರ್ಪಣಗೊಳ್ಳುತ್ತಿದೆ. ದೂರದೂರಿನಿಂದ ಬಂದ ಸುಂದರಾಂಗ ಜಾಣ ಎನ್ನುವಂತೆ, ದೂರದ ರಾಜ್ಯದಲ್ಲಿದ್ದರೂ ಕರುನಾಡಿಗೆ, ಕರುನಾಡಿನ ಸ್ನೇಹಿತರಿಗೆ ಮಿಡಿಯುವ ಅವರ ಮನಸ್ಸು ಹೂವಿನಷ್ಟೇ ಮಧುರ"
ಚಿತ್ರಕೃಪೆ - ಪ್ರವರ ಕೊಟ್ಟೂರು 

"ಓಹ್ ಚೆನ್ನಾಗಿದೆ ವಿ"ವರ್ಣನೆ"ಮುಂದುವರೆಯಲಿ"

"ದೊರೆ.... ಭಾನುವಾರವಾದ್ದರಿಂದ ಸಮಾರಂಭ ಸ್ವಲ್ಪ ನಿಧಾನವಾಗಿ ಶುರುವಾಗಿದೆ.. ಹೊರಗೆ ತಮ್ಮ ಸ್ನೇಹಿತರನ್ನು ಭೇಟಿ ಮಾಡಿ, ಉಭಯ ಕುಶಲ ಮಾತಾಡಿಸಿ, ಫೋಟೋ ತೆಗಿಸಿಕೊಂಡು ನಲಿಯುತ್ತಿದ್ದ ಸ್ನೇಹಿತ ಸ್ನೇಹಿತೆಯರನ್ನು ನಟರಾಜು ಅವರು ನಿಧಾನವಾದ ಸ್ವರದಲ್ಲಿ ಎಲ್ಲರನ್ನು ಸಭಾಂಗಣಕ್ಕೆ ಕರೆಯುತಿದ್ದಾರೆ".

"ಅರಸರೆ ಈಗೋ ನೋಡಿ ಒಂದು ಸುಂದರ ಜಾನಪದ ಗೀತೆಯಿಂದ ಕಾರ್ಯಕ್ರಮ ಶುರುವಾಯಿತು... ನಿರೂಪಕರಿಂದ ಕಾರ್ಯಕ್ರಮದ ಕಿರು ಪರಿಚಯ, ಸ್ವಾಗತ ಮಾತುಗಳು ನಡೆಯುತ್ತಿದೆ."

ಇಂದಿನ ಕಾರ್ಯಕ್ರಮದ ಒಂದು ಪಕ್ಷಿ ನೋಟ ನಿಮಗೆ ನೀಡುತ್ತಿದ್ದೇವೆ... ಮಹನೀಯರ ಹೆಸರು ಮತ್ತು ಅವರ ಕಿರುಪರಿಚಯ ಈ ಕೆಳಗಿನಂತಿದೆ ಮತ್ತು ನಂತರದ ವಿವರಣೆಯನ್ನು ಫೇಸ್ ಬುಕ್ನಲ್ಲಿ ಚಿತ್ರಗಳು ಹಾಕಿರುತ್ತಾರೆ.. ಅದನ್ನ ನೋಡಲು ನಿಮಗೆ ನಾವು ಕಣ್ಣಾಗುತ್ತೇವೆ"
    ಚಿತ್ರಕೃಪೆ - ನಸೀಮ - ಕಾರ್ಯಕ್ರಮದ ಪಕ್ಷಿನೋಟ 
ಮೊದಲಿಗೆ ನಿರೂಪಕ ವಿನಯ್ ಅವರು ಅಬ್ದುಲ್ ಸತ್ತಾರ್ ಅವರನ್ನು ವೇದಿಕೆಗೆ ಕರೆದು ರವಿ ಮೂರ್ನಾಡ್ ಅವರ ಬಗ್ಗೆ ಮಾತಾಡೋಕೆ ಹೇಳಿದ್ರು. ಅವರು ಮಾತಾಡ್ತಾ ರವಿಯವರು ಎಲೆ ಮರೆ ಕಾಯಿಗಳಿಗೆ ಕೊಡ್ತಾ ಇದ್ದ ಪ್ರೋತ್ಸಾಹ, ಅವರ ಬ್ಲಾಗ್, ಕನ್ನಡ ಪ್ರೀತಿ, ಕನ್ನಡ ಬ್ಲಾಗ್ ಗ್ರೂಪ್ ಲಿ ಅವರ ಸಾಧನೆ ಬಗ್ಗೆ ಮಾತಾಡಿ ಒಂದು ನಿಮಿಷದ ಮೌನಾಚರಣೆ ಗೆ ಕರೆ ಕೊಟ್ಟರು.

ಇವಾಗ  ಗಣ್ಯರನ್ನು ವೇದಿಕೆಗೆ ಕರೆಸಲಾಗುತ್ತಿದ್ದೆ  ಮತ್ತು ಡಾ. ಎಸ್.ಎಂ.ನಟರಾಜು ಅವರ 'ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ... ಮತ್ತು ಖುಷಿನಗರಿಯ ಆತನ ನಲ್ಮೆಯ ಗೆಳತಿಯೂ...' ಹಾಗೂ 'ಎಲೆಮರೆಕಾಯಿ' ಕೃತಿಗಳು   ಗೋಪಾಲ ವಾಜಪೇಯಿ ಅವರಿಂದ ಬಿಡುಗಡೆಯಾಗುತ್ತಿದೆ.

ಚೇತನಾ ತೀರ್ಥಹಳ್ಳಿಯವರು ಎರಡು ಕೃತಿಯ ಬಗ್ಗೆ ಮಾತಾಡುತ್ತಾ . "ವಂಡರ್ ಲ್ಯಾಂಡಿನ... " ಈ ಪುಸ್ತಕ ಪತ್ರ ಕಾದಂಬರಿಯ ರೂಪದಲ್ಲಿದೆ ಅಂತ ಹೇಳುತ್ತಾ ಇದ್ದಾರೆ, ಜೊತೆಗೆ ಹೇಗೆ ಮತ್ತು ಯಾಕೆ ಆಪ್ತವಾಗುತ್ತದೆ ಎಂದು ತಿಳಿಸುತ್ತಿದ್ದಾರೆ . ಎಲೆ ಮರೆ ಕಾಯಿಯನ್ನು ಅವರು ಕಾರಣಾಂತರಗಳಿಂದ ಓದಲಾಗಲಿಲ್ಲವಂತೆ ಹಾಗಾಗಿ ಬ್ಲಾಗ್ ಬಗ್ಗೆ ಮಾತಾಡುತ್ತಾ ಇದ್ದಾರೆ.
    ಆಮೇಲೆ ಡಾ. ಬಾನಂದೂರು ಕೆಂಪಯ್ಯ ಅವರಿಂದ ಒಂದು ಹಾಡು ಸುಶ್ರಾವ್ಯವಾಗಿ ಹಾಡುತ್ತಿದ್ದಾರೆ ,  ಮನು ಬಳಿಗಾರ್ &
    ಗೋಪಾಲ ವಾಜಪೇಯಿ ಅವರಿಂದ ಶುಭ ನುಡಿಗಳು ಕೇಳಿಬರುತ್ತಿದೆ
      ಡಾ. ಬಾನಂದೂರು ಕೆಂಪಯ್ಯ ಅವರಿಂದ "ಪಂಜು" ವೆಬ್ ಸೈಟ್ ನ ಬಿಡುಗಡೆಯಾಗುತ್ತಿದೆ.
        "ಜರಗನಹಳ್ಳಿ ಶಿವಶಂಕರ್ ಅವರಿಂದ ಭಾಷಣ ನಡೆಯಬೇಕು ಮತ್ತು ಚುಟುಕು ಸ್ಪರ್ಧೆಯ ಬಹುಮಾನ ವಿತರಣೆ... ವಿಜೇತರಿಗೆ ಅಭಿನಂದನೆ ಸಲ್ಲಿಸುತ್ತಾ ಬಹುಮಾನ ವಿತರಿಸಲು ಸಜ್ಜಾಗುತ್ತಿದೆ ವೇದಿಕೆ"

        "ಮಹಾರಾಜ ನಿಮಗೆ ವೀಕ್ಷಕ ವಿವರಣೆ ಹೇಳುತ್ತಲೇ ನಮಗೆ ಅಲ್ಲಿ ಹೋಗಲು ಮನಸಾಗುತ್ತಿದೆ... ಅದೂ  ಅಲ್ಲದೆ ಒಂದು ಜೊತೆಯ ಕಣ್ಣುಗಳು ಬರೆದ ಚುಟುಕಗಳಿಗೆ ಮೊದಲನೇ ಬಹುಮಾನ ಕೂಡ ಬಂದಿದೆ.. ಅದನ್ನು ಸ್ವೀಕರಿಸಲು ಅಲ್ಲಿಗೆ ಹೋಗಲೇ ಬೇಕು.. ನಿಮ್ಮ ಅಪ್ಪಣೆ ಇದ್ದರೆ ನಾವಿಬ್ಬರು ಅಲ್ಲಿಗೆ ಹೋಗಿಬಂದು ಮತ್ತೆ ಸುದೀರ್ಘ ವಿವರಣೆ ಕೊಡುತ್ತವೆ ಆಗಬಹುದೇ ಮಹಾರಾಜ?"

        "ಓಹ್ ಹೌದೆ ಮಗು.. ಅಭಿನಂದನೆಗಳು ಹೋಗಿಬನ್ನಿ... ಅಲ್ಲಿಯವರೆಗೆ ನಾನು ಇಲ್ಲೇ ಓಡಾಡಿಕೊಂಡು ಇರ್ತೇನೆ.. ಬರುವಾಗ ಆ ಎರಡು ಪುಸ್ತಕಗಳನ್ನು ತನ್ನಿರಿ"

        "ಹಾಗೆ ಆಗಲಿ ಮಹಾರಾಜ.. ಬೇಗ ಬಂದು ಬಿಡುತ್ತೇವೆ.. ಬಂದು ಮುಂದಿನ ಕಾರ್ಯಕ್ರಮದ ವಿವರಣೆಯನ್ನು ನೀಡುತ್ತೇವೆ ... ನಮಸ್ಕಾರ ಮಹಾರಾಜ"

        ನಾಲ್ಕು ಜೊತೆ ಕಣ್ಣುಗಳು ಸೀದಾ ಸಭಾಂಗಣಕ್ಕೆ ಬಂದರು,ಅಷ್ಟರಲ್ಲಿ ವೇದಿಕೆ ಬಹುಮಾನವನ್ನು ವಿತರಿಸಲು ವೇದಿಕೆ ಸಿದ್ಧವಾಗಿತ್ತು.  ವಿಜೇತರ ಹೆಸರುಗಳನ್ನೂ, ಅವರ ಕಿರುಪರಿಚಯ ಮಾಡಿಸುವ ಮಾತುಗಳನ್ನು ಭಿತ್ತರಗೊಳಿಸುತಿತ್ತು ಒಂದು ಸುಂದರವಾಣಿ! 

        ಚಿತ್ರ ಕೃಪೆ - ಪಂಜು ಅಂತರ್ಜಾಲ 

        ಚಿತ್ರ ಕೃಪೆ - ಪಂಜು 
        ಬಹುಮಾನ ಸ್ವೀಕರಿಸಿದ ನಂತರ, ಮತ್ತೆ ಕಾರ್ಯಕ್ರಮದ ವೀಕ್ಷಕ ವಿವರಣೆ ಮುಂದುವರೆಯಿತು.. 

        "ಮಹಾರಾಜ..ನಾವು ಬಂದೆವು... ಮತ್ತೆ ಮುಂದುವರೆಸುತ್ತಿದ್ದೇವೆ...  ಡಾ. ಬಾನಂದೂರು ಕೆಂಪಯ್ಯ ಅವರಿಂದ ಮತ್ತೆ ನಾಲ್ಕು ಮಾತುಗಳು ಜೊತೆಗೆ ಹಾಡುಗಳನ್ನೂ ಹಾಡಿದರು, ಲೇಖಕ ನಟರಾಜು ಅವರು ಒಂದು ಕಿರು ಮಾತಗಳನ್ನು ಉಲಿದರು  ಮತ್ತು ಪ್ರಕಾಶಕರಿಂದ ಕಿರು ಭಾಷಣ ನಡೆಯಿತು . ನಂತರ ಎನ್ ಸಿ ಮಹೇಶ ಅವರಿಂದ ಮಾತುಗಳು, ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಅರ್ಪಣೆಯ ಸಮಯದಲ್ಲಿ  ಉಷಾ ಕಟ್ಟೆಮನೆಯವರು ಬಂದಿದ್ದನ್ನ ಗಮನಿಸಿ ಅವರನ್ನು ವೇದಿಕೆಗೆ ಕರೆದು ಗೌರವಾರ್ಪಣೆ ಮಾಡಲಾಯಿತು" 
          "ಇದಾದ ಮೇಲೆ ಈಶಾನ್ಯ ಭಾರತೀಯ ನೃತ್ಯಗಳ ಕಿರುಚಿತ್ರ ಪ್ರದರ್ಶನದ ಮೂಲಕ ಕಾರ್ಯಕ್ರಮದ ಮುಕ್ತಾಯವಾಯಿತು"

          "ಮಹಾರಾಜ ಇದು ಇಂದಿನ ಕಾರ್ಯಕ್ರಮ ಒಂದು ವಿವರಣೆ. ನಿಮಗೆ ಇಷ್ಟವಾಯಿತೆ?"

          "ಪುಟಾಣಿಗಳೇ ನಿಮ್ಮ ಮಧುರವಾಣಿಯಲ್ಲಿ ಅರಳಿದ ಕಾರ್ಯಕ್ರಮದ ವಿವರಣೆ ಕುರುಕ್ಷೇತ್ರದ ವಿವರಣೆಗಿಂತ ಒಂದು ಕೈ ಮೇಲು ಎನ್ನಬಹುದು.. ಶ್ರೀ ಕೃಷ್ಣನ ಆಶೀರ್ವಾದ ಬ್ಲಾಗ್ ಲೋಕದ ಎಲ್ಲ ತಾರೆಗಳ ಮೇಲೂಇರಲಿ ... ಹಾಗು ಇಂದಿನ ಲೇಖಕ ಮೃದು ಮನಸಿನ ನಟರಾಜು ಅವರಿಗೆ ಯಶಸ್ಸು ಸದಾ ನೆರಳಿನಂತೆ ಇರಲಿ ಎಂದು ಆಶೀರ್ವಾದ ಕಳಿಸುತ್ತಿದ್ದೇನೆ. ಶುಭವಾಗಲಿ ಪುಟಾಣಿಗಳೇ!!!"

          "ಧನ್ಯವಾದಗಳು ಮಹಾರಾಜ.. !"

          (ಅಣ್ಣಯ್ಯ.. ಕಾರ್ಯಕ್ರಮ ತುಂಬಾ ಸುಂದರವಾಗಿತ್ತು, ನಿಮಗಾಗಿ ಎರಡು ಪುಸ್ತಕಗಳನ್ನು ಸುಲತ ತೆಗೆದುಕೊಂಡಿದ್ದಾರೆ..ಹಾಗು ಶ್ರೀಕಾಂತಣ್ಣ ಕಾರ್ಯಕ್ರಮ ಸುಂದರವಾಗಿತ್ತು... ಎಲ್ಲರ ಮಾತುಗಳು ತುಂಬಾ ಖುಷಿ ಕೊಟ್ಟಿತು. ಅದರಲ್ಲೂ ಹೆಣ್ಣನ್ನು ಅಳಿಸಬೇಡಿ.. ಅವರ ಕಣ್ಣೀರನ್ನು ದೇವರು ಅಳೀತಾನೆ  ಎನ್ನುವ ಮಾತು ಬಹಳ ಇಷ್ಟವಾಯಿತು.. ಚುಟುಕಗಳು ತುಂಬಾ ಇಷ್ಟವಾದವು " ಈ ಸಂದೇಶಗಳು  ಮೊಬೈಲ್ ನಲ್ಲಿ ರಿಂಗಣಿಸಿದಾಗ ಮನಸ್ಸಿಗೆ ಬಂದ ಮಾತುಗಳು ಹಾಗೂ ಅವರ ಕೆಲ ಮಾತುಗಳು, ನನ್ನ ವಿಚಿತ್ರ ಕಲ್ಪನೆ ಇವೆಲ್ಲ ಸೇರಿ ಲೇಖನವಾಗಿ ಹರಡಿಕೊಂಡಿದೆ.. ಈ ಲೇಖನದಲ್ಲಿ ಮೂಡಿಬರುವ ಜೋಡಿ ಕಣ್ಣುಗಳ ಒಡತಿಯರು ಪುಟ್ಟಿ ಸುಷ್ಮಾ ಮತ್ತು ಸುಲತ ಸಿಸ್ಟರ್!)