Saturday, August 24, 2013

ಅಪ್ಪಾ..... you will win!!!

"ತಂತ್ರಜ್ಞಾನ ಬಂದು ಮೂಲೆ ಮೂಲೆಯ ಧೂಳನ್ನು ಬಡಿದೆಬ್ಬಿಸಿ ಜಗತ್ತನ್ನೇ ಒಂದು ಪುಟ್ಟ ಹಳ್ಳಿಯನ್ನಾಗಿ ಮಾಡಿಬಿಟ್ಟಿದೆ... "

"ಅಪ್ಪಾ ಇದು ಗೊತ್ತು ಏನಾದರೂ ಹೊಸ ಕಥೆ ಹೇಳಪ್ಪಾ... ?"

ಯಾಕೋ ಸಂಯಮ, ತಾಳ್ಮೆಗೆ ಹೆಸರಾಗಿದ್ದ ಮಗಳು ದಿಡೀರ್ ಅಂತ ಹಳೇ ವಿಚಾರವನ್ನು ಬಿಟ್ಟು ಬೇರೆ ಹೊಸ ದಾರಿಗೆ ಹೊರಳಲು ಅಥವಾ ಹೊರಳಿಸಲು ಪ್ರಯತ್ನ ಪಡುತ್ತಿದ್ದಳು...

"ಹೌದಾ ಪಾಪ . ಇದೊಂದು ವಿಚಿತ್ರ ಕಥೆ.. ವಿಕ್ರಮ ಬೇತಾಳನ ಕಥೆ.. ಕೇಳುವೆಯ...."

"ವಾವ್ ನೀವು ಕಥೆ ಹೇಳ್ತೀರಾ ಅಂದ್ರೆ ಬಿಡ್ತೀನಾ... ಹೇಳಿ ಅಪ್ಪಾ"
---------------------------------------
ಮರದಿಂದ ಬೇತಾಳನನ್ನು ಇಳಿಸಿ ಬೆನ್ನ (ಹೆಗಲ) ಮೇಲೆ ಹಾಕಿಕೊಂಡು ವಿಕ್ರಮ ಖಡ್ಗ ಹಿಡಿದು ಹೊರಟ.. ನೇತಾಡಿ ನೇತಾಡಿ ಸುಸ್ತಾಗಿದ್ದ ಬೇತಾಳಕ್ಕೆ ಬೇಸರವಾಗದಿರಲೆಂದು ಕಥೆ ಹೇಳಲು ಶುರುಮಾಡಿದ..

"ಒಂದೂರಲ್ಲಿ ಒಬ್ಬ ಮಾನವ ಇದ್ದ.. ಬುದ್ದಿವಂತ, ತಕ್ಕ ಮಟ್ಟಿಗೆ ತಿಳುವಳಿಕೆ ಇತ್ತು, ಸಂಘಜೀವಿ.. ಕಾಡಲ್ಲಿ ಮರ ಕಡಿದು ಅದನ್ನ ತುಂಡು ತುಂಡು ಮಾಡಿ.. ತನ್ನ ಯಜಮಾನರಿಗೆ ಲೆಕ್ಕ ಒಪ್ಪಿಸುವ, ಹಾಗೆಯೇ ಅದಕ್ಕೆ ಬೇಕಾದ ಲೆಕ್ಕ ಪತ್ರ ಬರೆಯುವ ಕೆಲಸ ಮಾಡುತ್ತಿದ್ದ.. "

"ಹಾ ಆಮೇಲೆ"

ಕೆಲಸದಲ್ಲಿ ಶ್ರದ್ಧೆ ನಿಷ್ಠೆ ಯಾವಾಗಲೂ ಅವನ ಎರಡು ಕಣ್ಣುಗಳಾಗಿದ್ದವು.. ಸಂತಸದಿಂದ ತನ್ನ ಸುಖಿ ಪರಿವಾರದ ಜೊತೆ ಜೀವನ ನಡೆಸುತ್ತಿದ್ದ.. "

"wow intersting....ಆಮೇಲೆ?"

"ತನ್ನ ಪರಿವಾರವನ್ನು ನಗೆಯ ಕಡಲಲ್ಲಿ ತೇಲಿಸಲು ಎಲ್ಲಾ ರೀತಿಯ ಕಸರತ್ತನ್ನು ತಾಳ್ಮೆಯಿಂದ ಮಾಡುತ್ತಿದ್ದ... ಹೀಗೆ ಸಾಗುತ್ತಿರಲು ಒಂದು ದಿನ.. ಅವನ ಯಜಮಾನ.. ಬಂದು... ನೋಡಪ್ಪ.. ನಾನು ನಡೆಸುತ್ತಿದ್ದ ಈ ಸಣ್ಣ ಕೈಗಾರಿಕೆಯನ್ನು ಇನ್ನೊಬ್ಬರು ಬಂದು ಕೊಂಡುಕೊಂಡಿದ್ದಾರೆ.. ಇನ್ನು ಮುಂದೆ ನಾನೇ ಅವರು ಹೇಳಿದ್ದನ್ನ ಕೇಳಬೇಕು.. ನೀನು ಹಾಗೆಯೇ ಇರಬೇಕು ಆಯಿತೆ.. ?"

"hmmmmmmmmmmmmmmmmm..."

"ಅವನಿಗೆ ಒಂದು ಕ್ಷಣ ಏನೂ ತೋಚದಾಯಿತು.. ಸರಿ ಮನ, ಮನೆಯ ಜವಾಬ್ಧಾರಿ.. ಕಣ್ಣ ಮುಂದೆ ಬಂದು ನಿಂತಿತ್ತು.. ಸುತ್ತ ಮುತ್ತಲ ಕಾಡು ಪ್ರದೇಶ ಕ್ರಮೇಣ ನಗರೀಕರಣವಾಗುತ್ತಿತ್ತು.. ಕಾಡುಗಳು ಇದ್ದರೇ ತನಗೆ ಕೆಲಸ  ಇಲ್ಲದೆ ಹೋದರೆ.... ಆ ಆತಂಕ ಬೆನ್ನು ಹುರಿಯಲ್ಲಿ ನಡುಕ ಹುಟ್ಟಿಸುತ್ತಿತ್ತು.. ತನ್ನ ನಗುವನ್ನು ಯಾವುದೇ ಕಾರಣಕ್ಕೂ ಬಿಡಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ .. ಕಷ್ಟಗಳು ಮನುಜನಿಗಲ್ಲದೆ ಮರಕ್ಕೆ ಬರುತ್ತದೆಯೇ  ಎನ್ನುವ ಸಿದ್ಧಾಂತ ಅವನದು.. ಕಣ್ಣಿಗೆ ಕಾಣುವ ದೇವರುಗಳು, ಕಾಣದ ದೇವರುಗಳ ಕೃಪೆ ಆಶೀರ್ವಾದ ತನ್ನ ತಲೆಕಾಯುವ ವಜ್ರ ಕಿರೀಟ ಎಂದು ಬಲವಾಗಿ ನಂಬಿದ್ದ.. "

"ಬೇತಾಳ ಮಧ್ಯೆ ಬಾಯಿ ಹಾಕಿತು.. .. ಅದು ಸರಿ ಗುರು ಕಥೆ ಚೆನ್ನಾಗಿ ಬರ್ತಾ ಇದೆ.. ಮುಂದುವರೆಸು... "

"ಹೀಗೆ ಸಾಗಿತು.. ಅವನ ಜೀವನ.. ಒಂದು ದಿನ ಅಚಾನಕ್ಕಾಗಿ ಹೊಸ ಯಜಮಾನ ಬಂದು.. ನೋಡಪ್ಪ ಇನ್ನು ಮುಂದೆ ಹೀಗೆ ಇರಬೇಕು.. ದಿನಕ್ಕೆ ಇಷ್ಟೇ ಹೊತ್ತು ನಗಬೇಕು.. ಹೆಚ್ಚು ನಗುವ ಹಾಗೆ ಇಲ್ಲ.. ಅಂತೆಲ್ಲ ಕಟ್ಟು ನಿಟ್ಟು ಮಾಡಿದರು.. .."

"ಹೊ.. ಹೊ... closeup tooth paste use ಮಾಡ್ಬೇಕು.. mysore sandal ಸೋಪ್ ಉಪಯೋಗಿಸಬೇಕು ಅನ್ನುವ ಮಟ್ಟಕ್ಕೆ ಕಟ್ಟಿ ಹಾಕಿದರು ಆಲ್ವಾ ಅಂತು ಬೇತಾಳ"

"ಅರೆ ಬೇತಾಳ.. ನಾನು ನಿನ್ನ ಹೊತ್ತು ನೆಡೆಯುತ್ತಿದೇನೆ.. ಕಥೆ ಮುಗಿಯುವ ತನಕ ನೀನು ಮಾತಾಡುವ ಹಾಗಿಲ್ಲ ಓಕೆ ನಾ"

"ಸರಿ ಗುರುವೇ ಮುಂದುವರೆಸು"

"ಯಾಕೋ ಕಟ್ಟು ಪಾಡು, ಅಂಕೆ ಶಂಕೆ ತೀರ ಹೆಚ್ಚಾದಾಗ.. ಸುತ್ತಲ ಮುತ್ತಲ ಕಾಡನ್ನು ನೋಡತೊಡಗಿದ.. ಬೇರೆ ಮರ, ಗಿಡ, ಗಂಟೆಗಳು ಸಿಗುತ್ತವೆಯೋ ಏನೋ ಅಂತಾ.... ನೋಡು ನೋಡುತ್ತಲೇ  ದಿನಗಳು ವಾರಗಳಾದವು, ವಾರಗಳು ಸೋಪ್ ಪೌಡರ್ ಹಾಕಿಕೊಂಡು ಮಾಸಗಳಾದವು.. ಮಾಸಗಳು ಅಂಗಿ ಶರಾಯಿ ತೊಟ್ಟು ವರ್ಷವಾಯಿತು.. ಆದರೆ ಅವನ ಮುಖದ ಮೇಲೆ ಜಿನುಗುತಿದ್ದ ಮಂದಹಾಸ ಮರೆಯಾಗಿರಲಿಲ್ಲ.. .. ಹೀಗೆ ಅವನ ಭಗೀರಥ ಪ್ರಯತ್ನದಲ್ಲಿ ಅವನ ಪರಿವಾರದವರು, ಸ್ನೇಹಿತರು ವಿಶ್ವಾಸಿಗಳು ಜೊತೆಯಲ್ಲಿ ನಡೆದಿದ್ದರು.... "

"ಸರಿ ಗುರು ಆಮೇಲೆ"

"ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹ ಗೀತೆ ಇನ್ನಿಲ್ಲಾ ಪ್ರಣಯ ಗೀತೆ ಬಾಳೆಲ್ಲ.. "

"ಏನ್ ಗುರುವೇ ಅಣ್ಣಾವ್ರ ಚಿತ್ರ ಗೀತೆ ಶುರುಮಾಡಿದೆ.. ಏನ್ ಸಮಾಚಾರ"

"ಶ್ರಾವಣ ಮಾಸವು ತಂದ  ಉಡುಗೊರೆ ಉಲ್ಲಾಸವ ತರಲಿ ಆ "ಮಂಜುನಾಥ"ನ ಕೃಪಾ ಕಟಾಕ್ಷವೂ ಹಾಗೆಯೇ ಅವನ ಸುತ ಗಣಪತಿಯ ಆಶೀರ್ವಾದವು ಎಂದೆಂದು ನಿನಗಿರಲಿ"

"ಅಯ್ಯೋ ಗುರುವೇ ಏನು ಸಾಹಿತ್ಯವನ್ನೇ ಬದಲಾಯಿಸಿ ಬಿಟ್ಟೆ.. ಇರಲಿ ಇರಲಿ.. ನಿನ್ನದು ಏನೋ ವಿಷಯ ಇದೆ ಇರಲಿ ಕಥೆ ಮುಂದುವರೆಸು"

"ಹೀಗೆ ಮಂಜುನಾಥನ, ಕಾಶಿ ವಿಶಾಲಕ್ಷಿಯ ಅನುಗ್ರಹ.. ಕೃಷ್ಣನ ನೀಳ ಜಡೆ, ಅವನ ಕೊಳಲು, ಪಾಂಚಜನ್ಯದ ವಿಜಯದ  ನಾದ ತಣ್ಣಗಿನ ಕೋಮಲತೆ ಬೆಚ್ಚಗಿನ ಶಾಖ.. ಎಲ್ಲವೂ ಅವನಿಗೆ ಹೊಸ ಹುರುಪು ಕೊಟ್ಟಿತು.. ಅವನ ಭಗೀರಥ ಪ್ರಯತ್ನಕ್ಕೆ ಹೊಸ ಹಸಿರಿನ ಚೈತನ್ಯ ಸಿಕ್ಕೆ ಬಿಟ್ಟಿತು.. .. ಅವನ ಸಂತೋಷಕ್ಕೆ ಪಾರವೇ ಇಲ್ಲ..... ಅಚಾನಕ್ಕಾಗಿ ಅವನ ಕಣ್ಣಲ್ಲಿ ದೇವಗಂಗೆ ಧುಮುಕುತ್ತ ಸಾಗಿದಳು.. "

ಬೇತಾಳ ಇದು ಕಥೆ.. ಈಗ ನಾ ಕೇಳುವ ಪ್ರಶ್ನೆಗೆ ಉತ್ತರಿಸು.. ಇಲ್ಲದೆ ಹೋದರೆ ಮತ್ತೆ ನಿನ್ನ ಹೊತ್ತು ನಾ ನಡೆಯೋಲ್ಲ"

"ಹೊ ಇದೊಳ್ಳೆ ಕಥೆ ಆಯ್ತಲ್ಲ.. ಸರಿ ಅದೇನು ಕೇಳ್ತೀಯೋ ಕೇಳು"

"೧. ಬೇತಾಳನಾದ ನೀನು ನನಗೆ ಕಥೆ ಹೇಳಬೇಕಿತ್ತು.. ಉತ್ತರ ನಾ ಹೇಳಬೇಕಿತ್ತು.. ಆದರೆ ಇಲ್ಲಿ ಉಲ್ಟಾ ಪುಲ್ಟಾ
 ೨. ಕಷ್ಟಗಳು ಕಳೆದು ಸುಖದ ಹಾದಿಯಲ್ಲಿದ್ದ ಅವನಿಗೆ ಯಾಕೆ ಭಗೀರಥ ಪ್ರಯತ್ನ ಮಾಡಿಯೂ ದೇವಗಂಗೆ ಕಣ್ಣಲ್ಲಿ  ಉದ್ಭವವಾದಳು..
 ೩.  ಅವನ ಮುಖದಲ್ಲಿನ ನಗೆಯ ಬಗ್ಗೆ ಯಾಕೆ ಅಷ್ಟೊಂದು ಬಾರಿ ನಾ ಹೇಳಿದೆ"

"ಹ ಹ ಏನ್ ಗುರುವೇ ಇಂತಹ ಪ್ರಶ್ನೆ ಕೇಳಿಬಿಟ್ಟೆ.. ಇರಲಿ ಮೊದಲನೇ ಪ್ರಶ್ನೆಗೆ ಕಡೆಯಲ್ಲಿ ಉತ್ತರಿಸುವೆ.. ಈಗ ಎರಡನೇ ಪ್ರಶ್ನೆಗೆ ಉತ್ತರಿಸುವೆ ಕೇಳು... ಅವನ ಕಷ್ಟದ ದಿನಗಳಲ್ಲಿ ಅವನ ಪರಿವಾರದವರೆಲ್ಲ ಒಳ್ಳೆಯ ದಿನ ಬರುತ್ತದೆ ಹೆದರಬೇಡ ಎಂದು ಹೇಳುತ್ತಲೇ ಇದ್ದರು... ಅವನ ಪ್ರಚಂಡ ಆತ್ಮ ವಿಶ್ವಾಸ ಅವನ ಮನಸ್ಸನ್ನು ಕುಗ್ಗದ ಹಾಗೆ ನೋಡಿಕೊಳ್ಳುತ್ತಿತ್ತು.. ಹೊಸ ಹುರುಪು ಚೈತನ್ಯ ಸಿಕ್ಕ ಮೇಲೆ ಅದನ್ನ ತನ್ನ ಪರಿವಾರದವರಿಗೆ ಹೇಳಿದಾಗ ಎಲ್ಲರು ಸಂತಸಪಟ್ಟು ಖುಷಿಯಲ್ಲಿದ್ದಾಗ ಅವನ ವಂಶದ ಕುಡಿ ಬಂದು ತಬ್ಬಿ ಕೊಂಡು.. ಅಪ್ಪಾ... you will win ಅಂತ ಹೇಳಿತು.... ಬಳ್ಳಿಗೆ ಮರ ಆಸರೆ ಸಹಜ .. ಆದರೆ ಇಲ್ಲಿ ಬಳ್ಳಿಯೇ  ಮರಕ್ಕೆ ಆಸರೆಯಾಗಿ ನಿಂತು ಹೊಸ ಉಲ್ಲಾಸಭರಿತ ಆ ನಾಲ್ಕು ಪದಗಳನ್ನು ಹೇಳಿದ್ದು ಅವನಿಗೆ ಇನ್ನಷ್ಟು ಸಂತಸ ತಂದಿತು.. ಆ ಸಂತಸ ಕಣ್ಣಲ್ಲೇ ದೇವಗಂಗೆಯಾಗಿ ಹರಿಯಿತು... "

"ಬೇತಾಳ ಸೂಪರ್ "

ಇನ್ನು ಮೂರನೇ ಪ್ರಶ್ನೆಗೆ ಉತ್ತರ... ಮರ ಬೆಳೆಯುವುದು ಮಣ್ಣಿಂದ.. ಆದರೆ ಅದೇ ಮರ ಬೆಳವಣಿಗೆ ನಿಲ್ಲಿಸಿ ಬಿಟ್ಟರೆ.. ಸುತ್ತ ಮುತ್ತಲ ಗೆದ್ದಲು ಮಣ್ಣಿನ ರೂಪ ಮಾಡಿಕೊಂಡು ಮರವನ್ನು ತಿಂದು ಬಿಡುತ್ತದೆ... ಅಲ್ಲಿಗೆ ಮಣ್ಣಿಂದ ಬೆಳೆಯಬೇಕಾದ ಮರ ಮಣ್ಣಿಂದಲೇ ಅಳಿಯುತ್ತದೆ.. ಹಾಗೆಯೇ ಕಷ್ಟ ನಷ್ಟಗಳು ಬಂದಾಗ ನಗುವನ್ನು ಮರೆತು ಬಿಟ್ಟರೆ ನಗುವೇ ನಮ್ಮನ್ನು ಮರೆತು ಬಿಡುತ್ತದೆ.. ಆಗ ಚಿಂತೆ ಚಿತೆಯ ರೂಪದಲ್ಲಿ ನಮ್ಮನ್ನು ಸುಡಲು ಶುರುಮಾಡುತ್ತದೆ.... ಚಿಂತೆಗೆ ಮದ್ದು ಬೇರೆಯೇನೂ ಇಲ್ಲಾ ...  ಬರಿ ಒಂದು ಹೂ ನಗೆ ಅಷ್ಟೇ ಸಾಕು...

"ನಿನ್ನ ಬೆನ್ನು ತಟ್ಟೋಣ ಅಂದ್ರೆ.. ನನ್ನ ಬೆನ್ನು ಏರಿ ಕುಳಿತಿದ್ದೀಯ.. Anyway ಬೇತಾಳ you are awesome...."

"ಈಗ ಮೊದಲನೇ ಪ್ರಶ್ನೆಗೆ ಉತ್ತರ... ಬೆನ್ನಿಗೆ ಸಮಸ್ಯೆಯನ್ನು ಕಟ್ಟಿ ಕೊಳ್ಳಬೇಕು ಆಗಲೇ ಛಲ ಮೈಯಲ್ಲಿ ಮೂಡಿಬರುತ್ತದೆ... ಆದರೆ ಆ ಸಮಸ್ಯೆಗೆ ಮಾತನಾಡಲು ಬಿಡಬಾರದು.. ಮೊದಲೇ ನಾವು ಅದನ್ನು ಬೆನ್ನ ಮೇಲೆ ಹೇರಿಕೊಂಡಿರುತ್ತೇವೆ ಇನ್ನು ಅದಕ್ಕೆ  ಮಾತಾಡಲು ಬಿಟ್ಟರೆ.. ನಮ್ಮ ತಲೆಯ ಮೇಲೆ ಹತ್ತಿ ಕೂತು ಬಿಡುತ್ತದೆ.. ಹಾಗಾಗಿ ಸಮಸ್ಯೆಗೆ ಸಮಸ್ಯೆ ಕೊಟ್ಟರೆ ಉತ್ತರ ತಾನೇ ತಾನಾಗಿ ಹೊಳೆಯುತ್ತದೆ... ಅದೇ ಕೆಲಸವನ್ನು ನೀನು ಮಾಡಿದ್ದು ವಿಕ್ರಮ ಮಹಾರಾಜ.. ಹಾಗೆಯೇ ಅದನ್ನೇ ಈ ಕಥಾನಾಯಕ ಕೂಡ ಮಾಡಿದ್ದು.. ಎಲ್ಲರಲ್ಲೂ ಉತ್ಸಾಹ, ಪ್ರೋತ್ಸಾಹ ಕಂಡಿದ್ದ  ಅವನಿಗೆ ಸಮಸ್ಯೆ ಒಂದು ಸಮಸ್ಯೆ ಆಗಿರಲಿಲ್ಲ.. ಜೊತೆಗೆ "ನಗು ನಗುತ ನಲಿ ನಲಿ ಏನೇ ಆಗಲಿ" ಎನ್ನುವ  ಅಣ್ಣಾವ್ರ ಹಾಡಿನಂತೆ ಜೀವನ ನಡೆಸುವ ಅವನಿಗೆ ಸಮಸ್ಯೆ ಕೂಡ ಅವನ ಮುಂದೆ ಮಂಡಿ ಊರಿ ಕೂರದೆ ನಗುತ್ತ ಮುಂದೆ ಸಾಗಿ ಹೋಗುತ್ತದೆ.. "

"ಬೇತಾಳ ನಿಜಕ್ಕೂ ನಿನ್ನ ಹೊತ್ತು ನಡೆದಿದ್ದು ನನಗೆ ಸಮಾಧಾನ ತಂದಿತು ಒಂದು ಒಳ್ಳೆಯ ಕಥೆಗೆ ಅಷ್ಟೇ ಒಳ್ಳೆಯ ಸಂದೇಶ ಕೊಟ್ಟ ನಿನಗೆ ನಾ ಚಿರ ಋಣಿ.. ಹೋಗಿ ಬಾ ಬೇತಾಳ ಮತ್ತೊಮ್ಮೆ ನೀನು ಸಿಕ್ಕರೂ ನಿನ್ನಿಂದ ಒಳ್ಳೆಯ ಉತ್ತರ ಸಿಗುವ ಸಮಸ್ಯೆಯಾಗಿ ಬಾ... bye ಬೇತಾಳ..."

"ಗುರುವೇ.. ಸೂಪರ್ ಸೂಪರ್ .. ನೀನು ಕಥೆ ಹೇಳುವ ಶೈಲಿ.. ಸರಿ ಹೋಗಿ ಬಾ ಸಮಯ ಸಿಕ್ಕರೆ ಮತ್ತೆ ಸುಖವಿಚಾರ ವಿನಿಮಯ ಮಾಡಿಕೊಳ್ಳುವ ಸ್ನೇಹಿತರ ಹಾಗೆ ಸಿಗೋಣ.. " ಎಂದು ಬೇತಾಳ ಹಾರಿ ಹೋಯಿತು..
--------------------------------------------

ಅಪ್ಪಾ ಸೂಪರ್ ಕಥೆ ಅಪ್ಪ ತುಂಬಾ ಇಷ್ಟವಾಯಿತು.. ಸದಾ ನಕ್ಕರೆ...  ಅಲ್ಲಿಯೇ ಸಕ್ಕರೆ ಬಂದು ಬೀಳುತ್ತದೆ ಅಲ್ವಾ ಅಪ್ಪ.. ನಾನು ನಗುತ್ತಲೇ ಇರುತ್ತೇನೆ.. ಕಷ್ಟ ಬಂದ್ರೆ ಬರಲಿ ಅಲ್ವಾ.. ಅಪ್ಪಾ ದೂರದ ಬೆಟ್ಟ ಚಿತ್ರದ ಹಾಡು ಹೇಳಪ್ಪಾ...  ನಿಮ್ಮ ಬಾಯಲ್ಲಿ ಕೇಳಬೇಕು ಒಮ್ಮೆ...

"ನೀ ಪಕ್ಕ ಇದ್ರೆ ಹಿಂಗೆ ಬೆಟ್ಟನೆತ್ತೀನ್ ಬೆಳ್ನಾಗೆ.. 
ಏಸೇ ಕಷ್ಟ ಬಂದ್ರು ನಂಗೆ ... ನೀಗ್ಸೆ ಬಿಡ್ತೀನಿ ಸುಮ್ಗೆ.. 
ಪ್ರೀತಿನೇ  ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ 
ಹಸಿವಿನಲ್ಲೂ ಹಬ್ಬಾನೆ 
ದಿನವು ನಿತ್ಯ ಉಗಾದಿನೇ ನನ್ನ ನಿನ್ನ ಪಾಲಿಗೆ"

ಕಣ್ಣಲ್ಲಿ ನೀರು ತುಂಬಿಕೊಂಡು ಮಗಳು ಅಪ್ಪನನ್ನು ತಬ್ಬಿಕೊಂಡು ಹೇಳಿದಳು 

"ಅಪ್ಪಾ you must win....and you will win... "