Wednesday, December 23, 2015

ಬೇತಾಳನ ಕಥೆಗಳು - ವಿಚಿತ್ರ ವಿಚಿತ್ರ

ಕಪ್ಪು ಅಂದರೆ ಕಾಡುಗಪ್ಪು... ಹುಲುಮಾನವರ ಸುಳಿವಿಲ್ಲಾ..

ಲಕ್ಷ್ಮಿನಾಥ  ಒಬ್ಬನೇ  ನೆಡೆದು ಹೋಗುತ್ತಿದ್ದ... ಬಾಯಲ್ಲಿ ಗಾಯಿತ್ರಿ ಮಂತ್ರ ಸಾಗುತ್ತಿತ್ತು. ಹೆದರಿಕೆ ಎಂದರೆ ಹೆದರಿಕೆ.. ಹೆದರಿಕೆ ಇಲ್ಲ ಅಂದರೆ ಹೆದರಿಕೆ ಇಲ್ಲ. ಒಂದು ರೀತಿಯ ಧೈರ್ಯಶಾಲಿ ಅವನು.. ಯಾವುದೇ ಪರಿಸ್ಥಿತಿ ಬಂದರೂ ಹೆದರಿಕೆ ಇಲ್ಲದೆ ಎದುರಿಸುತ್ತಿದ್ದ. ಆದರೆ ಧೈರ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಾಗಲಿ ಎಂದು ತನ್ನ ಇಷ್ಟವಾದ ಮಂತ್ರ ಜಪಿಸುತ್ತಿದ್ದ.

ಊ ಊ ಎಂದು ಗೂಬೆ ಕೂಗುತ್ತಿತ್ತು. ಸ್ಮಶಾನ ಮೌನ.. ಮರಗಳೋ ದೈತ್ಯಕಾರವಾಗಿತ್ತು.. ಆ ಕತ್ತಲಲ್ಲಿ ಅವೇ ಭೂತವಾಗಿ ಕಾಣುತ್ತಿತ್ತು. ವಿಚಿತ್ರ ವಿಚಿತ್ರ ಆಕಾರ ತಳೆದಿದ್ದ ಆ ಮರಗಳು ಎಂಥಹ ಗಟ್ಟಿ ಗುಂಡಿಗೆ ಇರುವವರ ಎದೆಯನ್ನು ಒಮ್ಮೆ ಝಲ್ ಎನ್ನಿಸುತ್ತಿದ್ದುದು ಸುಳ್ಳಲ್ಲ.

ಬಾಯಾರಿಕೆ ಆಗಿತ್ತು.. ಸುತ್ತಲೂ ನೋಡಿದರೆ ಬರಿ ಕತ್ತಲೆ ಬಿಟ್ಟರೆ ಬೇರೆ ಏನು ಇಲ್ಲ.

ಲಕ್ಷ್ಮಿ ಮನೆಗೆ ಹೋಗಬೇಕಾದರೆ.. ಈ ಸ್ಮಶಾನದ ಹಾದಿಯೇ ಕಾಲು ದಾರಿ.. ಇಲ್ಲವಾದರೆ ಅನೇಕ ಕಿಮೀ ಗಳಷ್ಟು ಹೆಚ್ಚು ನಡೆಯಬೇಕಿತ್ತು. ಅವನಿಗೆ ಹೇಗಿದ್ದರೂ ಗಾಯಿತ್ರಿ ಮಂತ್ರ ಇದೆ ನನ್ನ ಜೊತೆಯಲ್ಲಿ ಎಂದು ಹೊರಟೆ ಬಿಟ್ಟಿದ್ದ. ಇದೇನು ಮೊದಲಲ್ಲ, ಅನೇಕ ಬಾರಿ ಅಮಾವಾಸ್ಯೆ, ಸಂಕ್ರಮಣ, ಹುಣ್ಣಿಮೆ ಎನ್ನದೆ ನೆಡೆದು ಸಾಗಿದ್ದ ಚಿರಪರಿಚಿತ ಹಾದಿ.

ಇಂದೂ ಮನೆಗೆ ಬೇಗ ಹೋಗಬೇಕೆಂದು ಹೊರಟಿದ್ದರೂ, ಅರಿವಿಗೆ ಬಾರದ ಕೆಲಸಗಳು ಅವನನ್ನು ತಡೆಹಿಡಿದಿದ್ದವು. ಸರಿ ಕಚೇರಿಯಿಂದ ಹೊರಟಿದ್ದೆ ಸುಮಾರು ಮಧ್ಯ ರಾತ್ರಿ ಒಂದು ದಾಟಿತ್ತು. ತನ್ನ ಬೈಕ್ ಪಂಚರ್ ಆದ ಕಾರಣ ನಡೆದೆ ಹೊರಟಿದ್ದ.

ಆ ಸ್ಮಶಾನ ಎಷ್ಟು ಚಿರಪರಿಚಿತ ಅಂದರೆ, ಎಷ್ಟೋ ಘೋರಿಗಳ ಮೇಲೆ ಬರೆದಿದ್ದ ಹೆಸರು, ಜನನ, ಮರಣದ ದಿನಾಂಕ ಬಾಯಿಪಾಠ ಆಗಿ ಹೋಗಿತ್ತು. ಎಷ್ಟೋ ದಿನ ಬೇಕಂತಲೇ ಅವನು ತನ್ನ ಬೈಕ್ ಬಿಟ್ಟು ಈ ಕಾಲು ಹಾದಿಯಲ್ಲಿ ನಡೆದದ್ದು ಇತ್ತು.

ಅವನು ತನ್ನ ಯೋಚನೆಯಲ್ಲಿಯೇ ಮುಳುಗಿದ್ದ, ಬರಬರನೆ ಹೆಜ್ಜೆ ಹಾಕುತ್ತಿದ್ದ, ಗಾಯಿತ್ರಿ ಮಂತ್ರ ಸಾಗುತ್ತಿತ್ತು. ಅಚಾನಕ್ ಆ ಸ್ಮಶಾನದ ಮೂಲೆಯಲ್ಲಿ ಒಂದು ಬೆಳಕು ಕಂಡಿತು. ಅಲ್ಲಿ ಒಬ್ಬ ಕಾವಲುಗಾರ ವಾಸವಾಗಿದ್ದ ಮನೆ. ಆದರೆ ತೀರ ಒಂದು ವಾರದ ಕೆಳಗೆ, ಜೀವನದಲ್ಲಿ ಬೇಸತ್ತು, ಅದೇ ಮನೆಯ ಹೊರಗಿನ ಒಂದು ಹುಣಿಸೇಮರಕ್ಕೆ ನೇಣು ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದ. ಈ ವಿಷಯ ಲಕ್ಷ್ಮಿಗೂ ಗೊತ್ತಿತ್ತು. ಆ ಮನೆಯಿಂದ ಬೆಳಕು ಬಂದದ್ದು ಇವನಿಗೆ ಆಶ್ಚರ್ಯ ಜೊತೆಗೆ ಸ್ವಲ್ಪವೇ ಸ್ವಲ್ಪ ಹಣೆಯಲ್ಲಿ ಬೆವರು ಮೂಡಿತ್ತು.

ಒಮ್ಮೆ ಹಾಗೆ ಆ ಕಾವಲುಗಾರನನ್ನು ನೆನೆಸಿಕೊಂಡಿತು ಮನ. ದಣಿವಾಗಿದ್ದಾಗ ಅಥವಾ ಮಾತಾಡಲು ವಿಷಯ ಬೇಕಿದ್ದಾಗ, ಲಕ್ಷ್ಮಿ ಅನೇಕ ಬಾರಿ ಇದೆ ಕಾವಲುಗಾರನ ಜೊತೆ ಮಾತಾಡಲು ಕೂರುತಿದ್ದದು ಇತ್ತು. ಕಾವಲುಗಾರ ಇವನನ್ನು ನೋಡಿದ ತಕ್ಷಣ, ಅಲ್ಲಿಯ ಯಾವುದೋ ಸಮಾಧಿಯನ್ನು ಕೈಯಿಂದ ಗುಡಿಸಿ, ಬನ್ನಿ ಸರ್ ಇಲ್ಲೇ ಕುಳಿತುಕೊಳ್ಳಿ ಎಂದು ಹೇಳಿ, ಇಬ್ಬರೂ ಲೋಕಾಭಿರಾಮವಾಗಿ ಮಾತಾಡುತ್ತ ಗಣೇಶ್ ಬೀಡಿಯನ್ನು ಎಳೆಯುತಿದ್ದ ನೆನಪು ಹಾಗೆ ಮನದಲ್ಲಿ ಹಾದು ಹೋಯಿತು.

ಅದೇ ಗುಂಗಿನಲ್ಲಿ, ಲಕ್ಷ್ಮಿ ಆ ಬೆಳಕಿನ ಕಿರಣದತ್ತ ಹೆಜ್ಜೆ ಹಾಕಿದ.

ಬಾಗಿಲು ಅರ್ಧವೆ ತೆಗೆದಿತ್ತು, ಚಿಮಣಿ ಬುಡ್ಡಿ ಅಲ್ಪ ಸ್ವಲ್ಪ ಶಕ್ತಿ ಉಳಿಸಿಕೊಂಡು ಬೆಳಕನ್ನು ಬೀರುತ್ತಿತ್ತು. ಬಾಗಿಲನ್ನು ತಳ್ಳಿದ ಲಕ್ಷ್ಮಿ, ಕರ್ ಎಂದು ತುಸು ತುಸುವೇ ತೆರೆದುಕೊಂಡಿತು. ಯಾಕೋ ಮೊದಲ ಬಾರಿಗೆ ಗಾಬರಿ ಆಯಿತು ಲಕ್ಷ್ಮಿಗೆ.

"ಅರೆ ಲಕ್ಷ್ಮಿ ಬಂದೆಯಾ ಬಾ.. ಅಲ್ಲಿ ನೀರಿದೆ.. ಕುಡಿದು ದಣಿವಾರಿಸಿಕೋ"

ಹೃದಯದ ಬಡಿದ ಲಕ್ಷ್ಮಿಗೆ ಕೇಳುವಷ್ಟು ಜೋರಾಗಿ ಹೊಡೆದುಕೊಳ್ಳಲು ಶುರುವಾಯಿತು. ಆ ಮಂದ ಬೆಳಕಲ್ಲಿ ಸುತ್ತಲೂ  ಕಣ್ಣಾಡಿಸಿದ .. ಅರೆ ಬರೆ ಕತ್ತಲು ಬೆಳಕಲ್ಲಿ ಅಸ್ಪಷ್ಟ ದೃಶ್ಯ... ಒಂದಷ್ಟು ಪುಸ್ತಕಗಳ ರಾಶಿಯೇ ಇತ್ತು.. ಕಾವಲುಗಾರ ಅನಕ್ಷರಸ್ತ ಎಂದು ಗೊತ್ತಿದ್ದ ಲಕ್ಷ್ಮಿಗೆ ಸ್ವಲ್ಪ ಸ್ವಲ್ಪವೇ ಹೆದರಿಕೆ ಶುರುವಾಯಿತು. ನಾಲಿಗೆ ಒಣಗುತ್ತಿತ್ತು, ಗಾಯಿತ್ರಿ ಮಂತ್ರದ ಅಕ್ಷರಗಳು  ಲಯ ತಪ್ಪಲು ಶುರುಮಾಡಿದವು. ಯಾರೋ ಮೂಲೆಯಲ್ಲಿ ಕುಳಿತು ಮೆಲು ದನಿಯಲ್ಲಿ ಪುಸ್ತಕ ,ಓದುತ್ತಿದ್ದಂತೆ ಭಾಸವಾಯಿತು. ಹಣೆಯಲ್ಲಿ ಬೆವರಿನ ಹನಿಗಳು ಅಲಂಕಾರಗೊಂಡವು.. ಬೆರಳುಗಳು ನಡುಗಲು ಶುರುಮಾಡಿದವು, ಕಾಲುಗಳು ಸ್ವಾಧೀನ ಕಳೆದುಕೊಂಡೆವು ಎಂದು ಸಾರುತ್ತಿತ್ತು. ಯಾಕಾದರೂ ಈ ದಾರಿಯಲ್ಲಿ ಬಂದೆನೋ ಎಂದು ಮೊದಲ ಬಾರಿಗೆ ಅನಿಸಲು ಶುರುಮಾಡಿದವು.

ಕಿಟಕಿಗಳು ಕರ್ ಕರ್ ಎಂದು ಸದ್ದು ಮಾಡುತ್ತಾ ಮುಚ್ಚಿಕೊಂಡವು. ಗಾಬರಿ ಇನ್ನಷ್ಟು ಹೆಚ್ಹಾಗಿ ಹೆದರಿಕೆ ಶುರು ಆಯಿತು. ಕಿಟಕಿಗಳು ಮುಚ್ಚಿದ ರಭಸಕ್ಕೆ ದೀಪ ಜೋರಾಗಿ ನೃತ್ಯ ಮಾಡುತ್ತಾ ತನ್ನ ಕೆಲಸ ಆಯಿತು ಎಂದು ಸಾರಲು ಶುರುಮಾಡಿದವು.
ರಫ್ ಪಟ್..... ತಿರುಗಿ ನೋಡಿದ.. ಬಾಗಿಲು ರಪಾರನೆ ಮುಚ್ಚಿಕೊಂಡಿತು.

ಮೂಲೆಯಲ್ಲಿದ್ದ ಒಂದು ಆಕೃತಿ.. ಗಹಗಹಿಸಿ ನಗುವಂತೆ ಭಾಸವಾಯಿತು.. ಸದ್ದು ಜೋರಾಗಿಯೇ ಕೇಳುತ್ತಿತ್ತು..ಲಕ್ಷ್ಮಿಗೆ ಇಂದು ಭ್ರಮೆಯೋ ಅಥವಾ ನಿಜವೋ ಅರಿಯದೆ ಹೋಯಿತು. ಹೆದರಿಕೆಯಿಂದ ಬಟ್ಟೆ ಪೂರ ಒದ್ದೆಯಾಯಿತು. ಗಂಟಲು ಪೂರ್ಣ ಹೂತು ಹೋಗಿತ್ತು.. ಕಿರುಚಿಕೊಂಡರೂ ಯಾರಿಗೂ ಕೇಳದ ಹಾದಿ ಅದು.

ತಗೋ.. ಇದನ್ನು ತಗೋ.. ಇದು ಬಾಗಿಲಿನ ಬೀಗದ ಕೈ.. ಇದನ್ನು ನಿನ್ನ ಜೇಬಿನಲ್ಲಿ ಇಟ್ಟುಕೋ...
ಇಲ್ಲಿ ಕುಳಿತು.. ಈ ಪುಸ್ತಕಗಳನ್ನು ಓದಿಯೇ ನೀನು ಹೊರಗೆ ಹೋಗಬೇಕು.   ನಾನೇ ನಿನ್ನ ಜೇಬಿನಿಂದ ಈ ಕೀ ಯನ್ನು ತೆಗೆದು ನಿನಗೆ ಹೊರ ಹೋಗಲು ಅನುಮತಿ ಕೊಡುತ್ತೇನೆ.. ಅಲ್ಲಿಯ ತನಕ ನಿನಗೆ ಹೊರಗೆ ಹೋಗಲು ಅನುಮತಿಯಿಲ್ಲ..

ಕಣ್ಣುಗಳು ತೇಲಾಡ ತೊಡಗಿದವು.. ಹೃದಯ ಒಡೆದೇ ಹೋಗುತ್ತೇನೋ ಅನ್ನುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು.. ಬೇರೆ ದಾರಿಯಿರಲಿಲ್ಲ.. ಮೈಯಲ್ಲಿ ಇದ್ದ ನೀರೆಲ್ಲಾ ಬೆವರಾಗಿ ಹರಿದು ಹೋಗುತ್ತಿತ್ತು. ದೇಹ ಕಂಪಿಸುತ್ತಿತ್ತು..

ಒಂದು ಕಡೆ ದೆವ್ವಾ ಅಂದು ಕೊಳ್ಳಬಹುದಾದ ಆಕೃತಿ ... ಇನ್ನೊಂದು ಕಡೆ ಓದಬೇಕಾದ ಪುಸ್ತಕ... ಅದರ ಗಂಭೀರ ದ್ವನಿಯಿಂದ ಅನ್ನಿಸಿದ್ದು ಇದು ಕಲ್ಲು ಮನಸ್ಸಿನ ದೆವ್ವವಲ್ಲ.. ಸರಿ ಧೈರ್ಯ ಮಾಡಿ ಮಾತಾಡೋಣ ಅನ್ನಿಸಿ..

"ನೀ ಯಾರಪ್ಪ... .. ನನ್ನ ಹೋಗಲು ಬಿಡು.... ಎಂದು ಹೇಳುತ್ತಾ ನಿಧಾನವಾಗಿ ಬಾಗಿಲನ್ನು ಕಾಣದೆ ಅಸ್ಪಷ್ಟ ರೀತಿಯಲ್ಲಿ ಹೆಜ್ಜೆ ಹಾಕಿ ಬಾಗಿಲಿನ ಹತ್ತಿರ ಬಂದಾಗ... ಒಂದು ದೊಡ್ಡ ಪುಸ್ತಕದ ಗಂಟಿಂದ ಯಾರೋ ತಲೆಗೆ ಬಡಿದ ಹಾಗೆ ಆಯಿತು.. ಎಚ್ಚರ ತಪ್ಪಿ ಬಿದ್ದ.. ಬಾಯಿಂದ ರಕ್ತ ಜಿನುಗಿತ್ತು..

ಕಣ್ಣು ಬಿಟ್ಟಾಗ.. ಆಸ್ಪತ್ರೆಯ ಒಂದು ಹಾಸಿಗೆಯಲ್ಲಿ.. ಗ್ಲುಕೋಸ್ ಚುಚ್ಚಿಸಿಕೊಂಡು ಮಲಗಿದ್ದ.. ಹಾಗೆ ಕಣ್ಣು ಹಾಯಿಸಿದ.. ಎಲ್ಲಿದ್ದೇನೆ ಎಂದು ತಿಳಿದುಕೊಳ್ಳಲು..

ಕಣ್ಣುಗಳು ಪಕ್ಕಕ್ಕೆ ವಾಲಿದವು.. ಅಲ್ಲಿನ ದೃಶ್ಯ ಕಂಡು ಹೃದಯ ಹೊಡೆದುಕೊಳ್ಳಲು ಶುರುಮಾಡಿದವು...

ಆಸ್ಪತ್ರೆಯ ತನ್ನ ಮಂಚದ ಮೂಲೆಯಲ್ಲಿ ಒಂದು ಭಯಾನಕ ಆಕೃತಿ ದೊಡ್ಡ ಪುಸ್ತಕದ ಗಂಟನ್ನು ಇಟ್ಟುಕೊಂಡು ಓದುತ್ತಾ ಕೂತಿತ್ತು..






Tuesday, December 15, 2015

"ಅರಳಿ"ದ ಹೃದಯಗೀತೆ

ಅಮ್ಮನನ್ನು ಅಮ್ಮ, ತಾಯಿ, ಅಬ್ಬೆ, ಹೀಗೆ ನಾನಾ ರೀತಿಯಲ್ಲಿ ಕರೆಯುತ್ತಾರೆ.. ಹೇಗೆ ಕರೆದರೂ ಆ ಕರುಳಿನ ಕರೆಗೆ ಓಗೊಡುವ ಸುಂದರ ಹೃದಯ ತಾಯಿಯದು. ಕನ್ನಡಾಂಬೆಗೆ ಅರ್ಚಿಸಲು ಹೂವು, ಅಕ್ಷತೆ, ಶ್ರೀ ಗಂಧ, ಏನೇ ಇದ್ದರೂ ಇಲ್ಲದಿದ್ದರೂ ಅಕ್ಷರಗಳ ಜಾತ್ರೆಯೇ ಸಾಕು.

3K ಎನ್ನುವ ಸಮಾನ ಮನಸ್ಕರ ತಂಡವೂ ಇಂಥಹ ಅಕ್ಷರಗಳ ಅರ್ಚನೆಯನ್ನು ಹಲವಾರು ವರ್ಷಗಳಿಂದ ಮಾಡುತ್ತಲೇ ಇದ್ದಾರೆ. ಇಂಥಹ ಪರಿಶ್ರಮದ ಹೃದಯಾಳದಿಂದ ಹೊರಹೊಮ್ಮಿದ ಎರಡು ಕೃತಿಗಳು ಭಾವ ಸಿಂಚನ ಹಾಗೂ ಶತಮಾನಂಭಾವತಿ.  ಈ ವಸಂತದಲ್ಲಿ ಮೂಡಿ ಬಂದದ್ದು "ಹೊಂಗೆಮರದಡಿ ನಮ್ಮ ನಿಮ್ಮ ಕಥೆಗಳು". 



ಹರಿದು ಬಂದ ಅನೇಕ ಕಥೆಗಳಲ್ಲಿ ನಾ  ಬರೆಯಲು ಪ್ರಯತ್ನ ಪಟ್ಟ ಒಂದು ಬರಹವನ್ನು ಪ್ರಕಟಿಸಿ ಹೊಂಗೆ ಮರದಡಿ ನನಗೂ ಒಂದು ಜಾಗ ಕೊಟ್ಟ 3K ತಂಡಕ್ಕೆ ನನ್ನ ಶಿರಸ ನಮನಗಳು. 

*****


ಗಿಜಿ ಗಿಜಿಗುಡುತ್ತಲಿದ್ದರೂ,  ಕೋಟೆ ಕೊತ್ತಲು ಹೊಂದಿದ್ದ ಪುರಾತನ ಅನ್ನಿಸಿದರೂ, ಆಧುನಿಕತೆಯ ಸೋಗು ತೊಟ್ಟ ಮಲೆನಾಡಿನ ಹೆಬ್ಬಾಗಿಲಿನ ಒಂದು ಊರು. ಅಲ್ಲೊಂದು ಪುಟ್ಟ ಮನೆ. ಮನೆಯೊಳಗೆ ಮನದೊಳಗೆ ಸದಾ ನೆಲೆ ನಿಂತ ಪ್ರೀತಿ ತುಂಬಿದ ಉಸಿರು.  ಪುಟ್ಟ ಮಗುವಾಗಿದ್ದಾಗಿಂದ ಒಂದು ರೀತಿಯಲ್ಲಿ ಕೀಳರಿಮೆಯಲ್ಲಿಯೇ ಬೆಳೆಯುತ್ತಿದ್ದ ಮಗು.

ಶ್ಯಾಮಲ ವರ್ಣ.. ಸುಂದರ ಅನ್ನಿಸುವುದಕ್ಕೆ ಅಪವಾದವಾಗಿದ್ದ ರೂಪು, ರೇಷ್ಮೆಯಂತೆ ಗಾಳಿ ಬಂದರೆ ಹುಲ್ಲುಗಾವಲಾಗುತ್ತಿದ್ದ ತಲೆಗೂದಲು, ಯಾರೇ ಬಂದರೂ ಎರಡನೇ ಬಾರಿಗೆ ನೋಡದ ಮಗು ಅದು.

ಅದಕ್ಕಿದ್ದ ಒಂದೇ ಒಂದು ವರ ಅಂದರೆ.. ಅಸಾಧ್ಯ ತಲೆನೋವು. ಹೊಟ್ಟೆ ಹಸಿದರೆ ಮುಗಿಯಿತು ತಲೆಶೂಲೆ ಅಭ್ಯಾಗತ ಅತಿಥಿಯಂತೆ ಒಕ್ಕರಿಸಿಬಿಡುತಿತ್ತು. ಎಷ್ಟೋ ದಿನಗಳು ತಲೆನೋವು ತಾಳಲಾರದೆ ತನ್ನ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆದುಕೊಂಡು ಸಮಾಧಾನ ಮಾಡಿಕೊಳ್ಳುತ್ತಿತ್ತು ಆ ಮಗು. ಅದರಲ್ಲೂ ಹೊಟ್ಟೆ ಹಸಿದರೆ ಮುಗಿಯಿತು, ಮೊದಲೇ ಅಕ್ಕಿಯ ಡಬ್ಬಾ ಯಾವಾಗಲೂ ಕಸ್ತೂರಿ  ನಿವಾಸದ ವಂಶದ ಹಾಗೆ ತಳವನ್ನೇ ತೋರಿಸುತ್ತಿತ್ತು ☺☺☺!

ಹೊಟ್ಟೆಯನ್ನು ಭೂಮಿಗೆ ಒತ್ತುಕೊಂಡು ಆ ಭೂಮಿಯ ಕಾವನ್ನೇ ತನ್ನ ಹೊಟ್ಟೆಗೆ ಆಧಾರ ಮಾಡಿಕೊಂಡು ಮಲಗುತ್ತಿದ್ದ ಅ ಮಗುವಿಗೆ ಆಧಾರವಾಗುತ್ತಿದ್ದದು ಕೋಟೆ ಕೊತ್ತಲಿನ ಆಂಜನೇಯ ದೇವಸ್ಥಾನದ ಪ್ರಸಾದ ಇಲ್ಲವೇ ಮನೆಯ ಮಾಲೀಕರು ನೀಡುತ್ತಿದ್ದ ಉಳಿದ ಅನ್ನ.

ಹೀಗಿದ್ದರೂ ಆ ಮಗುವಲ್ಲಿ ಒಂದು ಅದ್ಭುತ ಭಾವ ಬೆಳೆಯುತ್ತಲಿತ್ತು. ಸದಾ ಆಂಜನೇಯನ ದೇವಸ್ಥಾನದಲ್ಲಿ ಕೇಳುತ್ತಿದ್ದ ಭಗವದ್ಗೀತೆ ಪಠಣ, ತನಗೆ ಅರಿವಿಲ್ಲದೆ ಶ್ರೀ ಕೃಷ್ಣನ ಮೇಲೆ ಮತ್ತು ಗೀತ ಎನ್ನುವ ಹೆಸರಿನ ಮೇಲೆ ಅಪರಿಮಿತ ಪ್ರೀತಿ ಅರಳಿಬಿಟ್ಟಿತು.

ಅರೆ ಆ ಪ್ರೀತಿ ಅರಳಲು ಅರಳಿ ಮರವೂ ಕೂಡ ಜೊತೆಯಾಗಿತ್ತು. ಹೌದು ಅರಳಿಮರ ಎಲೆಯನ್ನು ನೀವೆಲ್ಲರೂ ನೋಡೇ ನೋಡಿರುತ್ತೀರಿ. ಎಲೆಯ ತೊಟ್ಟು ಸಣ್ಣದಾಗಿರುತ್ತದೆ.. ಆಮೇಲೆ ಅಗಲವಾಗುತ್ತದೆ, ನಂತರ ಪ್ರೀತಿಯ ಹೃದಯದ ಆಕೃತಿ ಮೂಡುತ್ತದೆ.. ನಂತರ ಅದರ ಆಕೃತಿ ತೀವ್ರವಾಗುತ್ತಾ ಹೋಗುತ್ತದೆ.
ಚಿತ್ರಕೃಪೆ - ಗೂಗಲ್ 

ಈ ಅರಳಿ ಎಲೆಯ ಆಕಾರ ಅವನ ಮನಸ್ಸನ್ನು ಬಹಳ ಸೆಳೆದಿತ್ತು. ಆ ಅರಳಿಮರವನ್ನು ಪ್ರದಕ್ಷಿಣೆ ಹಾಕಲು ಅಲ್ಲೊಂದು ಹುಡುಗಿ ದಿನವೂ ಬರುತ್ತಲಿತ್ತು. ಅವಳನ್ನು ನೋಡುತ್ತಲೇ ಬೆಳೆದ ಆ ಮಗು, ಸುಂದರ ಅಯ್ಯೋ ಅಯ್ಯೋ ತಪ್ಪು ತಪ್ಪು ಸುಂದರವಲ್ಲ.....ಆದರೆ ಪ್ರಾಯಕ್ಕೆ ಬಂದಿತು. ಆ ಹುಡುಗಿಯೂ ಪ್ರಾಯಕ್ಕೆ ಬಂದಿದ್ದಳು. ಬಾಲ್ಯದಿಂದಲೂ ಕಿರುಗಣ್ಣಲ್ಲೇ ನಿಂತಿದ್ದ ನೋಟ, ಯೌವನಕ್ಕೆ ಬಂದಾಗ ಅದು ಮೆಲ್ಲಗೆ ಪ್ರೀತಿಯ ಹಾದಿಯಲ್ಲಿ ಸಾಗುತ್ತಿತ್ತು.

ಅರಳಿ ಎಲೆಯ ಹಾಗೆಯೇ ಅವನ ಕಣ್ಣುಗಳಲ್ಲಿ ಮತ್ತು ಹೃದಯದಲ್ಲಿ ಆರಂಭವಾದ ಒಂದು ಸಣ್ಣ ನೋಟ, ಮೆಲ್ಲಗೆ ವಿಸ್ತರಿಸುತ್ತಾ ಹೋಗಿ, ಹಾಗೆಯೇ ಮುಂದುವರೆದು ಅರಿವಿಲ್ಲದ ಪ್ರೀತಿಯ ಆಕೃತಿ ಪಡೆಯುತ್ತಾ ಅದು ಪ್ರೇಮದ ತೀವ್ರತೆಯನ್ನು ಪಡೆಯುತ್ತಲಿತ್ತು.

ಆ ಹುಡುಗಿಯ ಹೆಸರು... ಇನ್ನೇನು ನಿಮಗೆ ಗೊತ್ತೇ ಇದೆಯಲ್ಲ ಅವನ ಪ್ರೀತಿಯ ಹೆಸರು "ಗೀತ". ಆ ಹುಡುಗಿ ಸುಂದರವಾಗಿದ್ದಳು. ಅವನು ಇಷ್ಟಪಡುವ ಉದ್ದನೆ ಜಡೆ, ಹೊಳಪು ಕಣ್ಣುಗಳು, ನೀಳ ನಾಸಿಕ, ಅದಕ್ಕೆ ಹೇಳಿ ಮಾಡಿಸಿದ ಹಾಗೆ ಹೊಳೆಯುವ ಮೂಗುಬೊಟ್ಟು, ಎರಡು ಹುಬ್ಬುಗಳ ನಡುವೆ ಇಡುವ ಹಣೆ ಬೊಟ್ಟಿನ ಕೆಳಗೆ ಒಂದು ಚಿಕ್ಕ ದೇವರ ಕುಂಕುಮ ಇಡುವ ಅವಳ ಮೊಗವನ್ನು ನೋಡುವುದರಲ್ಲಿಯೇ ಅವನಿಗೆ ಆನಂದ. ಅವಳ ಬಣ್ಣ, ಅರೆ ಬಣ್ಣ ಬಿಡಿ ಅವನಿಗೆ ಯಾವಾತ್ತಿಗೂ ಬಣ್ಣದ ಬಗ್ಗೆ ಮೋಹ ಇರಲೇ ಇಲ್ಲ. ಇಬ್ಬರೂ ಶ್ಯಾಮಲಾ ವರ್ಣದ ಕುಸುಮಗಳು.

ಕಣ್ಣಲ್ಲೇ ಗೋಪುರ ಕಟ್ಟಿಕೊಂಡರು. ಅವನು ಒಮ್ಮೆ ಧೈರ್ಯ ಮಾಡಿ ಕೇಳಿಯೇ ಬಿಟ್ಟಾ.

"ಏನ್ರಿ! ನಾ ನಿಮಗೆ ಇಷ್ಟವಾದರೆ ನೀವು ಒಂದು ಎಳೆಯ, ಹಸಿರಾದ ಅರಳಿ ಎಲೆಯನ್ನು ಕೊಡಿ.. ಇಷ್ಟವಿಲ್ಲದೆ ಹೋದರೆ ನನ್ನ ಹಲ್ಲುಗಳ ಹಾಗೆ ಹಣ್ಣಾದ ಹಳದಿಯಾಗಿರುವ ಅರಳಿ ಎಲೆಯನ್ನು ಕೊಡಿ"

ಆ ಹುಡುಗಿಗೂ ಇವನ ಹೆಸರು ಮತ್ತು ಈತನ ಮನಸ್ಸು ಇಷ್ಟವಾಗಿತ್ತು. ಅವನು ತನ್ನ ಗೆಳೆಯರ ಜೊತೆಯಲ್ಲಿ ಆಡುತ್ತಿದ್ದ ಹಿತ ಮಿತ ಮಾತುಗಳು ಇಷ್ಟವಾಗುತ್ತಿದವು. ಎಂದೂ ನೇರವಾಗಿ ತನ್ನ ಜೊತೆಯಲ್ಲಿ ಮಾತಾಡದ ಆ ಹುಡುಗನಲ್ಲಿ ಇಷ್ಟವಾಗುತ್ತಿದ್ದ ಗುಣ ಎಂದರೆ  ಸದಾ ಹಸನ್ಮುಖ ಮುಖಭಾವ. ನಗು ಎಂಬುದು ಅವನಿಗೆ ಭಗವಂತ ಕೊಟ್ಟ ದೊಡ್ಡ ಬಳುವಳಿ. ಎಂಥಹ ವಿಷಮ ಪರಿಸ್ಥಿತಿಯಲ್ಲೂ ಅವನ ನಗುವೇ ಅವನನ್ನು ಸಮಸ್ಯೆಗಳಿಂದ ಹೊರ ಬರಲು ಸಹಾಯ ಮಾಡುತ್ತಿತ್ತು. ಅದು ಅವಳಿಗೆ ಬಹು ಪ್ರಿಯವಾಗಿದ್ದ ವಿಷಯ.

ಯಾವುದೇ ಸಮಸ್ಯೆ ಬಂದರೂ ಸಮಾಧಾನ ಅವನ ಬಳಿಯಿದ್ದ ಬಹು ದೊಡ್ಡ ಅಸ್ತ್ರವಾಗಿತ್ತು ಎಂದು ಅವನ ಬಗ್ಗೆ ಇತರರು ಆಡುತ್ತಿದ್ದ ಮಾತಿನಿಂದ ಅರಿತ್ತಿದ್ದಳು.   ಅವನ ರೂಪ ಬಣ್ಣ ಯಾವುದು ಅವಳ ಕಣ್ಣ ಮುಂದಕ್ಕೆ ಕಾಣುತ್ತಲೇ ಇರಲಿಲ್ಲ, ಬದಲಿಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಅವನ ವ್ಯಕ್ತಿತ್ವ ಮತ್ತು ತನ್ನ ಕಡೆ ಅವಾಗವಾಗ ಕಿರುಗಣ್ಣಲ್ಲೇ ನೋಡುತ್ತಿದ್ದ ನೋಟ ಅವಳಿಗೆ ಅವನ ಹೃದಯದಲ್ಲಿ ಸದಾ "ಗೀತ ಗೀತ ಗೀತ ಗೀತ" ಎನ್ನುವ ಬಡಿತ ಇದ್ದೀತು ಎಂದು ಅನ್ನಿಸಿತ್ತು. 

ಹೊಳಪು ಕಣ್ಣುಗಳನ್ನು ಅತ್ತಿತ್ತ ತನ್ನೂರಿನಲ್ಲಿ ಅಡ್ಡಾದಿಡ್ಡಿ ಓಡಾಡುವ ಆಟೋಗಳ ಹಾಗೆ ಹರಿದಾಡಿಸಿದಳು. ಮಲಯಮಾರುತ ಹೊತ್ತು ತರುತ್ತಿದ್ದ ತಂಗಾಳಿ ಬರಿ ಹಳದಿ ಎಲೆಗಳನ್ನೇ ತೂರಾಡಿಸುತ್ತಿತ್ತು. ಅವಳ ಹೃದಯದ ಬಡಿತ ತೀವ್ರವಾಯಿತು.

ಹುಡುಗ ಆಸೆಗಣ್ಣುಗಳಿಂದ ನೋಡುತ್ತಲೇ ಇದ್ದಾ.. ಆದರೆ ಅವನ ಕಣ್ಣಿಗೆ ಅವನ ಹಲ್ಲಿನ ಬಣ್ಣದ ಎಲೆಗಳೇ ಕಾಣುತ್ತಿದ್ದವು. ಒಂದು ಕ್ಷಣ ಕಣ್ಣು ಮುಚ್ಚಿದ, ಆಂಜನೇಯನನ್ನು ನೆನೆದ, "ದೇವ ನನಗೆ ಯೋಗ್ಯತೆ ಇದ್ಡರೆ, ಗೀತಳನ್ನು ಸಾಕುವ ತಾಕತ್ತು ಇದ್ದರೆ, ನಿಜವಾಗಿಯೂ ಅವಳು ನನ್ನೊಡನೆ ಸುಖವಾಗಿ ಇರಬಲ್ಲಳು ಎನ್ನುವ ವಿಶ್ವಾಸ ನೀ ನನ್ನ ಮನದೊಳಗೆ ತುಂಬುವುದಾದರೆ..... ಇನ್ನು ನಿನ್ನ ಇಷ್ಟ" ಎಂದು ಕಣ್ಣು ತೆರೆದ.

ಹುಡುಗಿ ಇನ್ನೂ ಹಸಿರು ನವಿರು ಎಲೆಯನ್ನು ಹುಡುಕುತ್ತಲೇ ಇದ್ದಳು.. ಹಸಿರು ಸಿಕ್ಕಿದರೆ ಹುಡುಗನ ಉಸಿರಲ್ಲಿ ಹಸಿರಾಗುತ್ತೇನೆ ಎನ್ನುವ ಆಸೆ ಅವಳಿಗೆ. ಆದರೆ ಸುತ್ತ ಮುತ್ತಲೂ ಬರಿ ಹಳದಿ ಹಳದಿ ಹಳದಿ... !

ಅವಳು ಒಂದು ಕ್ಷಣ ತನ್ನ ಇಷ್ಟದೇವನಾದ ಶ್ರೀ ಕೃಷ್ಣನನ್ನು ನೆನೆಯುತ್ತಾ "ಕೃಷ್ಣ ನಿನ್ನ ಕಂಡರೆ ನನಗೆ ಇಷ್ಟ.. ನೀ ಭೋದಿಸಿದ ಹೆಸರನ್ನೇ ನಾ ಇಟ್ಟುಕೊಂಡಿದ್ದೇನೆ... ಅವನ ಬಾಳಿನಲ್ಲಿ ಹುಣ್ಣಿಮೆಯನ್ನು ತರಬೇಕೆಂಬುದು ನನ್ನ ಆಸೆ. ನಾ ಒಲಿದರೆ ಅವನ ಬಾಳು ಇನ್ನೂ ಹಸನು. ನಾ ನನಗಾಗಿ ಏನೂ ಬೇಡುವುದಿಲ್ಲ.. ಆದರೆ ಅವನಿಗಾಗಿ ನಾ ಮಿಡಿಯುತ್ತಿರುವೆ.. ಇನ್ನು ನಿನಗೆ ನಾ... !

ಶ್ರೀ ಕೃಷ್ಣ ಮತ್ತು ಆಂಜನೇಯ ಇಬ್ಬರೂ ಒಮ್ಮೆ ಕಣ್ಣು ಮುಚ್ಚಿ ಕುಳಿತರು.. ಇಬ್ಬರ ಬಳಿಯೂ ತಮ್ಮ ತಮ್ಮ ಭಕ್ತರ ಅರ್ಜಿಯ ಕಡತ ಬಂದು ನಿಂತಿದೆ. ಇಬ್ಬರಿಗೂ ತಮ್ಮ ಭಕ್ತರಿಗೆ ಒಳ್ಳೆಯದನ್ನೇ ಮಾಡುವ ಬಯಕೆ. ಜೊತೆಯಲ್ಲಿ ಅರಳಿ ಮರದ ಬುಡದಲ್ಲಿ ಅರಳಿದ ಅವರ ಹೃದಯದ ಪ್ರೀತಿಯನ್ನು ಹಣ್ಣು ಮಾಡುವ ತವಕ. ಆದರೆ ಅವರಿಬ್ಬರ ಆಸೆ ಇಬ್ಬರೂ ನಿಂತಲ್ಲಿಯೇ ನಿಲ್ಲದೆ,  ಪ್ರೇಮವನ್ನು ತಮ್ಮ ಪರಿಶ್ರಮದಿಂದ  ಗುರಿ ತಲುಪಿಸಲಿ ಎನ್ನುವ ಬಯಕೆ.

ಶ್ರೀ ಕೃಷ್ಣ ಆಂಜನೇಯನಿಗೆ ಹೇಳಿದ "ಹನುಮ ನೀ ಹಸಿರು ಎಲೆಯನ್ನು ಅವನಿಗೆ ತೋರಿಸು.. ನಾ ಅವಳನ್ನು ಅಲ್ಲಿಗೆ ಕರೆತರುವೆ"

ಮರದ ತುದಿಯಲ್ಲಿದ್ದ ಗೊಂಚಲು ಗೊಂಚಲು ಹಸಿರೆಲೆಗಳನ್ನು ಹನುಮ ತನ್ನ ಬಾಲದಿಂದ ಆ ಹುಡುಗ ಕೂತ ಕಡೆಗೆ ಬಗ್ಗಿಸಿದ, ಶ್ರೀ ಕೃಷ್ಣ ಆ ಹುಡುಗನ ಹಿಂದೆ ನಿಂತು ತನ್ನ ಕೊಳಲಿನ ನಾದದಿಂದ ಆ ಹುಡುಗಿಯ ಗಮನವನ್ನು ಹುಡುಗನ ಕಡೆಗೆ ಸೆಳೆದ.

ಅಲ್ಲಿಯ ತನಕ ಮೌನಗೌರಿಯಾಗಿದ್ದ ಹುಡುಗಿ.. ಮೊತ್ತ ಮೊದಲ ಬಾರಿಗೆ ತಾನೂ ಧೈರ್ಯ ಮಾಡಿ ಹುಡುಗನನ್ನು ಮಾತಾಡಿಸಿದಳು ಅದೂ ಏಕವಚನದಲ್ಲಿ (ಪ್ರೀತಿ ಹೃದಯದಲ್ಲಿದ್ದಾಗ ಗೌರವವಾಚಕ ಪರಿ ಪದ ಎಂದು ತಿಳಿದ ಹುಡುಗಿ ಅವಳು) " ಹೇ ಹುಡುಗ ನೀ ಅಂದರೆ ನನಗೂ ಇಷ್ಟ ಕಣೋ.. ನನ್ನನು ಒಮ್ಮೆ ಎತ್ತಿಕೊಳ್ಳೋ.. ಆ ಹಸಿರು ಎಲೆಯನ್ನು ತೆಗೆದು ಕೊಡುವೆ.. ಅಲ್ಲಿ ಇಲ್ಲಿ ಬಿದ್ದ ಎಲೆ ತರಹ ಅಲ್ಲಾ ಕಣೋ ನಿನ್ನ ಪ್ರೀತಿ.. ಅದು ಸದಾ ಹಸಿರಾದ ಉಸಿರಾಗಿಯೇ ಇರುವ ಪ್ರೀತಿ.. "

ಹುಡುಗನ ಕಣ್ಣಲ್ಲಿ ಜೋಗದ ಜಲಪಾತ.. ತಾ ಇಷ್ಟ ಪಟ್ಟ ಹುಡುಗಿ ನದಿಯಾಗಿ ತನ್ನನ್ನು ಸೇರುತ್ತಿದ್ದಾಳೆ ಎಂದು... ಹುಡುಗಿಗೆ ತಾನು ಪ್ರೀತಿಯ ಕಡಲು ಸೇರುತ್ತಿದ್ದೇನೆ ಎನ್ನುವ ಸಂತಸ.. ಅವಳ ಹೊಳಪು ಕಣ್ಣುಗಳು ಇನ್ನಷ್ಟು ಪ್ರಖರಗೊಂಡವು.. ಅವನ ಕಣ್ಣಲ್ಲಿ ಅವಳು ಇನ್ನಷ್ಟು ರೂಪಸಿಯಾಗಿ ಕಂಡರೆ.. ಅವಳಿಗೆ ಅವನ ಹೃದಯ ಹಾಡುತ್ತಿದ್ದ ಹಾಡು ಹೇಳಿಸಿತು "ಈ ಹೃದಯ ಹಾಡಿದೆ ಆಸೆಗಳ ತಾಳದೆ ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನೂ ಕೇಳದೆ"

Tuesday, December 8, 2015

ಗೌರಮ್ಮಜ್ಜಿ ಒಂದು ಹಿರಿಯ ತಲೆಮಾರಿನ ಕೊಂಡಿ - ಸಡಿಲವಾಯಿತು

ಕ್ರಿಕೆಟ್ ಆಟದಲ್ಲಿ ಹೀಗಾಗುವುದು ಸಹಜ

ಇಬ್ಬರೂ ಬ್ಯಾಟ್ಸಮನ್ ಅಥವಾ ಇಬ್ಬರು ಬೌಲರ್ ಗಳು ಒಟ್ಟಿಗೆ ಒಟ್ಟಿಗೆ ಜೊತೆಯಾಗಿದ್ದಾಗ ನಡುವಿನ ನಂಟು ಯಾವುದೇ ಗೋಂದು ಕೂಡ ಅಷ್ಟು ಗಟ್ಟಿಯಾಗಿರುವುದಿಲ್ಲ..

ಹಾಸನ ಬಳಿಯ ಕೌಶಿಕದ ಗ್ರಾಮದ ನಮ್ಮ ಅಮ್ಮನ ಸೋದರತ್ತೆ ಅರ್ಥಾತ್ ನಮ್ಮ ಅಜ್ಜ ಅಜ್ಜಿ ಈ ರೀತಿಯ ನಂಟಿಗೆ ಹೆಸರಾಗಿದ್ದರು.

ಸಾಮಾನ್ಯ ಮಾನವನ ಜೀವನದ ಅವಧಿ ಸುಮಾರು ಎಪ್ಪತ್ತು ವರ್ಷಗಳು.. ಆದರೆ ನಮ್ಮ ಅಜ್ಜ ಅಜ್ಜಿ ಸುಮಾರು ಎಪ್ಪತ್ತಕ್ಕು ಹೆಚ್ಚು ವರ್ಷಗಳ ಸುಧೀರ್ಘ ವೈವಾಹಿಕ ಜೀವನ ನಡೆಸಿ, ಮೂರು ವರ್ಷಗಳ ಹಿಂದೆ ಅಜ್ಜ ನಮ್ಮನ್ನು ಈ ಭುವಿಯಲ್ಲಿ ಬಿಟ್ಟು ಹೊರಟರು.

ಸುಧೀರ್ಘ ಬಾಳಿನ ಸಂಗಾತಿ ತಮ್ಮನ್ನು ಅಗಲಿದ ದುಃಖವನ್ನು ನುಂಗಿಕೊಂಡು ತಮ್ಮ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳ ತುಂಬು ಕುಟುಂಬವನ್ನು ನೋಡುತ್ತಾ ಅವರ ಏಳಿಗೆಯನ್ನು ನೋಡುತ್ತಾ ಕಳೆದಿದ್ದ ನಮ್ಮ ಅಜ್ಜಿ ಇಂದು ತಮ್ಮ ಬಾಳ ಬಂಧುವನ್ನು ಸೇರಲು ಸ್ವರ್ಗಾರೋಹಣ ಮಾಡಿದ್ದಾರೆ.

ಶಂಖದ ದೇವರ ಭಟ್ಟರ ಕುಟುಂಬದ ಎರಡನೇ ತಲೆಮಾರಿನ ಒಂದು ಕೊಂಡಿ ಇಂದು ಕಳಚಿಕೊಂಡಿತು.

ಪುಟ್ಟ ವಯಸ್ಸಿನಲ್ಲಿಯೇ ಪಡಬಾರದಷ್ಟು ಕಷ್ಟ ಪಟ್ಟು, ಒಂದು ತಲೆಮಾರಿನ ಇತಿಹಾಸದ ಜೊತೆಯಲ್ಲಿಯೇ ಬದುಕಿದ ಅಜ್ಜಿ, ಅಕ್ಷರಶಃ ಇಂದಿನ ಕಾಲಕ್ಕೆ ಅದ್ಭುತ ಮಾಹಿತಿ ಕೇಂದ್ರವಾಗಿದ್ದರು. ಎಲ್ಲರನ್ನೂ ಆತ್ಮೀಯವಾಗಿ ಹೆಸರಿಡಿದು ಮಾತಾಡಿಸುತ್ತಿದ್ದ ಅಜ್ಜಿ, ಅವರ ಅರಿವಿಗೆ ಬರದ ವಿಷಯ ಇಲ್ಲ ಎಂದರೆ ತಪ್ಪಿಲ್ಲ. ಅಷ್ಟು ನಿಖರವಾದ ಮಾಹಿತಿ ಅವರಲ್ಲಿ ಇರುತ್ತಿತ್ತು.

ಅವರ ಅಗಲಿಕೆ ಸಹಿಲಾರದಷ್ಟು ನೋವು ತರುತ್ತದೆ, ಅವರಿಲ್ಲ ಅನ್ನುವ ನೋವು ಇಂದು ನಾಳೆಗೆ ಮುಗಿಯುವುದಲ್ಲ. ಅದು ನಿರಂತರ.

ಅಜ್ಜಿ ನಿಮ್ಮಂತಹ ತಾಳ್ಮೆ, ಕಷ್ಟ ಸಹಿಷ್ಣುವನ್ನು ಆ ಭಗವಂತ ನಮ್ಮೆಲ್ಲರ ಬದುಕನ್ನು ಹರಸಲು ಈ ಭುವಿಗೆ ಕಳಿಸಿದ್ದ. ನಿಮ್ಮ ಹಾರೈಕೆ, ಆಶೀರ್ವಾದ ಎಂಬತ್ತೆಂಟು ವಸಂತಗಳನ್ನು ಬೆಳಗಿದೆ ಎಂದಾಗ ನಮಗೆಲ್ಲಾ ಒಂದು ಅದ್ಭುತವಾದ ಅನುಭವ ಹೃದಯಕ್ಕೆ ತಾಗುತ್ತದೆ.

ಕಷ್ಟಗಳನ್ನು ಬಂದ ಹಾಗೆ ಸ್ವೀಕರಿಸಿ, ಮನೆ ಮನವನ್ನು ಬೆಳಗುತ್ತಾ, ಆಚಾರ ವಿಚಾರಗಳು ಹೀಗೆ ಇರಬೇಕು ಎಂದು ನಿಮ್ಮ ಪರಿಧಿಯಲ್ಲಿ ಬಂದ ಎಲ್ಲರಿಗೂ ತಿಳಿಸುತ್ತಾ ಬದುಕು ಸಾಗಿಸಿದ ಬಗೆ ನಮಗೆಲ್ಲ ಅತ್ಯಂತ ಗೌರವ ಇದೆ. ಸಂಪ್ರದಾಯ, ಹಬ್ಬ ಹರಿದಿನಗಳ ಆಚರಣೆಯ ಬಗ್ಗೆ ಏನೇ ಅನುಮಾನ ನನ್ನ ಅಮ್ಮನಿಗೆ ಬಂದರೂ, ಇರು ಗೌರಮ್ಮನನ್ನು ಒಮ್ಮೆ ಕೇಳುತ್ತೇನೆ ಎಂದು ಧೈರ್ಯವಾಗಿ ತನ್ನ ಸೋದರತ್ತೆಯ ಬಳಿ ತಮ್ಮ ಅನುಮಾನ ಬಗೆ ಹರಿಯುತ್ತದೆ ಎನ್ನುವಷ್ಟು ಆತ್ಮ ವಿಶ್ವಾಸ ತುಂಬಿ ಕೊಂಡಿದ್ದರ ಹಿಂದೆ, ಈ ಹಿರಿಯ ಅಜ್ಜಿಯ ಬಳಿ ಇದ್ದ ಜ್ಞಾನದ ಅರಿವಾಗುತ್ತದೆ.

ಅಜ್ಜಿ ನಿಮ್ಮ ಕಾಲದಲ್ಲಿ ನಾವು ಇದ್ದೆವು, ನಿಮ್ಮನ್ನು ನೋಡಿದ್ದೆವು, ನಿಮ್ಮ ಆಶೀರ್ವಾದ ಪಡೆದಿದ್ದೆವು, ನಿಮ್ಮ ಆಶೀರ್ವಚನದ ಕವಚ ತೊಟ್ಟಿದ್ದೆವು ಎನ್ನುವ ಭಾವವೇ ನಮಗೆ ಶಕ್ತಿಯನ್ನು ಕೊಡುತ್ತದೆ. ಬಹುಶಃ ಆ ಸೃಷ್ಟಿ ಕರ್ತನಿಗೂ ಈ ರೀತಿಯ  ಶಕ್ತಿ ಬೇಕು ಎನ್ನಿಸುತ್ತದೆ, ಅದಕ್ಕಾಗಿ ತನ್ನ ಬಳಿಗೆ ನಿಮ್ಮನ್ನು ಬರಮಾಡಿಕೊಂಡಿದ್ದಾನೆ.

ತುಂಬಿದ ಬದುಕನ್ನು ನಿರ್ವಹಿಸಿದ ಪರಿಗೆ ನಾವೆಲ್ಲರೂ ಶಿರಸ ನಮಿಸುತ್ತೇವೆ...

ಹೋಗಿ ಬನ್ನಿ ಅಜ್ಜಿ.. ನಿಮ್ಮ ಆಶೀರ್ವಾದ.. ನೀವು ಶ್ರೀಕಾಂತಾ ಎಂದು ಕರೆಯುವ ಆ ದನಿ ನನ್ನ ಕಿವಿಯಲ್ಲಿ ಸದಾ ಗುನುಗುತ್ತಲಿರುತ್ತದೆ..
                                      

ಅಜ್ಜಿ ನಿಮ್ಮ ಬದುಕಿಗೆ ಅಕ್ಷರಗಳಿಂದ ಒಂದು ನಮನ.